ಲ್ಯಾಂಡರ್ ಜೊತೆ ಸಂಪರ್ಕ ಇನ್ನೂ ಸಾಧ್ಯವಾಗಿಲ್ಲ: ಶಿವನ್
‘ಮಿಷನ್ ಗಗನಯಾನ ’ ಇಸ್ರೋದ ಮುಂದಿನ ಆದ್ಯತೆ,
ಭುವನೇಶ್ವರ,ಸೆ.21: ಚಂದ್ರಯಾನ-2 ಶೇ.98ರಷ್ಟು ಯಶಸ್ಸು ಸಾಧಿಸಿದೆ ಮತ್ತು ‘ಮಿಷನ್ ಗಗನಯಾನ ’ ನಮ್ಮ ಮುಂದಿನ ಆದ್ಯತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು ಶನಿವಾರ ಇಲ್ಲಿ ಹೇಳಿದರು. ಚಂದ್ರನ ದಕ್ಷಿಣ ಧ್ರುವದಲ್ಲಿ ರಾತ್ರಿ ಆರಂಭಗೊಂಡಿರುವುದು ಚಂದ್ರಯಾನ-2ರ ವಿಕ್ರಮ ಲ್ಯಾಂಡರ್ ಜೊತೆ ಸಂಪರ್ಕವನ್ನು ಮರುಸ್ಥಾಪಿಸುವ ಸಾಧ್ಯತೆಯನ್ನು ಕ್ಷೀಣಗೊಳಿಸಿರುವ ನಡುವೆಯೇ ಇಸ್ರೋ ಅಧ್ಯಕ್ಷರ ಈ ಹೇಳಿಕೆಯು ಹೊರಬಿದ್ದಿದೆ.
ಚಂದ್ರಯಾನ-2ರ ಆರ್ಬಿಟರ್ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲಿ ಎಂಟು ಉಪಕರಣಗಳಿದ್ದು, ಪ್ರತಿಯೊಂದೂ ತನ್ನ ಕೆಲಸವನ್ನು ನಿಖರವಾಗಿ ಮಾಡುತ್ತಿದೆ. ವಿಕ್ರಮ ಲ್ಯಾಂಡರ್ ಜೊತೆ ಮರುಸಂಪರ್ಕ ಸಾಧಿಸಲು ಈವರೆಗೂ ಸಾಧ್ಯವಾಗಿಲ್ಲ. ಏನು ತಪ್ಪು ಸಂಭವಿಸಿತ್ತು ಎನ್ನುವುದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಗಗನಯಾನ ಅಭಿಯಾನವು ಇಸ್ರೋದ ಮುಂದಿನ ಆದ್ಯತೆಯಾಗಿರಲಿದೆ ಎಂದು ಐಐಟಿ-ಭುವನೇಶ್ವರದ ಎಂಟನೇ ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರದಲ್ಲಿದ್ದ ಶಿವನ್ ತಿಳಿಸಿದರು.
ಗಗನಯಾನ ಯೋಜನೆಯು ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಯಾನವಾಗಲಿದೆ. ಆರಂಭದಲ್ಲಿ ಪ್ರಕಟಿಸಲಾಗಿದ್ದ 2022ರ ಅಂತಿಮ ಗಡುವಿಗೆ ಮುನ್ನ ಡಿಸೆಂಬರ್,2020 ಮತ್ತು ಜುಲೈ,2021ರಲ್ಲಿ ಎರಡು ಮಾನವ ರಹಿತ ಬಾಹ್ಯಾಕಾಶ ಯಾನಗಳನ್ನು ನಿರ್ವಹಿಸಲಿರುವ ಇಸ್ರೋ 2012, ಡಿಸೆಂಬರ್ನಲ್ಲಿ ಮಾನವ ಸಹಿತ ಅಭಿಯಾನವನ್ನು ಕೈಗೊಳ್ಳಲಿದೆ.
10,000 ಕೋ.ರೂ.ವೆಚ್ಚದ ಈ ಮಹತ್ವಾಕಾಂಕ್ಷೆಯ ಯೋಜನೆಗೆ ಕೇಂದ್ರ ಸಂಪುಟವು ಕಳೆದ ವರ್ಷದ ಡಿ.28ರಂದು ಹಸಿರು ನಿಶಾನೆಯನ್ನು ತೋರಿಸಿತ್ತು. ಗಗನಯಾನ ಅಭಿಯಾನದಲ್ಲಿ ಮೂವರು ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಏಳು ದಿನಗಳನ್ನು ಕಳೆಯಲಿದ್ದಾರೆ.
ಅಂತರಿಕ್ಷ ನೌಕೆಯ ಉಡಾವಣೆಗಾಗಿ ಮೂರು ಹಂತಗಳ,ಬೃಹತ್ ಸಾಮರ್ಥ್ಯದ ಜಿಎಸ್ಎಲ್ವಿ ಮಾರ್ಕ್-IIIರಾಕೆಟ್ನ್ನು ಬಳಸಲಾಗುವುದು. ಅಭಿಯಾನವನ್ನು ಯಶಸ್ವಿಯಾಗಿಸಲು ಇತರ ರಾಷ್ಟ್ರೀಯ ಸಂಸ್ಥೆಗಳು ಇಸ್ರೋದೊಂದಿಗೆ ಕೈಜೋಡಿಸಲಿವೆ.
ಗಗನಯಾನ ಅಭಿಯಾನವು ಯಶಸ್ವಿಯಾದರೆ ಭಾರತವು ರಷ್ಯಾ,ಅಮೆರಿಕ ಮತ್ತು ಚೀನಾ ಬಳಿಕ ಮಾನವಸಹಿತ ಬಾಹ್ಯಾಕಾಶ ಯಾನವನ್ನು ಕೈಗೊಂಡ ವಿಶ್ವದ ನಾಲ್ಕನೇ ರಾಷ್ಟ್ರವಾಗಲಿದೆ.