“ಮಧ್ಯಮ ವರ್ಗಕ್ಕೆ 33 ಶೇ. ತೆರಿಗೆ, ಕಾರ್ಪೊರೇಟ್ ವರ್ಗಕ್ಕೆ 22 ಶೇ. ತೆರಿಗೆ”
ಕೇಂದ್ರವನ್ನು ಟೀಕಿಸಿದ ಸುರ್ಜೆವಾಲ
ಹೊಸದಿಲ್ಲಿ, ಸೆ. 21: ಕೇಂದ್ರ ಸರಕಾರ ಕಾರ್ಪೊರೇಟ್ ತೆರಿಗೆಯನ್ನು ಶೇ. 25.17ಕ್ಕೆ ಇಳಿಸಿದ ಒಂದು ದಿನಗಳ ಬಳಿಕ ಶನಿವಾರ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ, ಬಿಜೆಪಿ ಕೇವಲ ಶ್ರೀಮಂತರ ಬಗ್ಗೆ ಮಾತ್ರ ಚಿಂತಿಸುತ್ತಿದೆ ಎಂದಿದ್ದಾರೆ.
ಉದ್ಯೋಗಿಗಳಿಗೆ ಹಾಗೂ ಮಧ್ಯಮ ವರ್ಗಕ್ಕೆ ತೆರಿಗೆ ಶೇ. 33. ಆದರೆ, ದೊಡ್ಡ ಕಂಪೆನಿಗಳಿಗೆ ತೆರಿಗೆ ಶೇ. 22. ಇದರಿಂದ ಬಡವರ ಬಗ್ಗೆ ಕಾಳಜಿ ವಹಿಸದಿರುವ ಹಾಗೂ ಶ್ರೀಮತರ ಬಗ್ಗೆ ಕಾಳಜಿ ವಹಿಸುವ ಬಿಜೆಪಿ ನಿಲುವು ಸ್ಪಷ್ಟವಾಗಿದೆ ಎಂದು ಸುರ್ಜೇವಾಲ ಟ್ವೀಟ್ ಮಾಡಿದ್ದಾರೆ.
ಕಾರ್ಪೊರೇಟ್ ತೆರಿಗೆ ಇಳಿಕೆ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್, ಇದರಿಂದ ಶ್ರೀಮಂತರು ಲಾಭ ಪಡೆಯಲಿದ್ದಾರೆ. ಬಡವರನ್ನು ಅವರಷ್ಟಕ್ಕೇ ಬಿಟ್ಟುಬಿಡಲಾಗುತ್ತದೆ ಎಂದಿದ್ದಾರೆ.
‘‘ಹೌಡಿ ಮೋದಿ. ಕಾರ್ಪೊರೇಟ್ ದೀಪಾವಳಿ. ಇದರಿಂದ ಭಾರತ 1.45 ಲಕ್ಷ ಕೋಟಿ ರೂ. ಆದಾಯ ಕಳೆದುಕೊಳ್ಳಲಿದೆ. ಅಗತ್ಯವಿರುವ ಜನರಿಗೆ ದೀಪಾವಳಿ ಅಗತ್ಯ ಇದೆ” ಎಂದು ಕಪಿಲ್ ಸಿಬಲ್ ಟ್ವೀಟ್ನಲ್ಲಿ ಹೇಳಿದ್ದಾರೆ.
ಕಾರ್ಪೊರೇಟ್ಗಳ ಕೈಯಲ್ಲಿರುವ ಹೆಚ್ಚುವರಿ ಹಣ ಬೇಡಿಕೆಯನ್ನು ಉತ್ತೇಜಿಸದು. ಉಪಭೋಗವನ್ನು ಉತ್ತೇಜಿಸಲು ಗ್ರಾಮೀಣ ಜನರ ಕೈಯಲ್ಲಿ ಹೆಚ್ಚುವರಿ ಹಣ ಅಗತ್ಯ ಇದೆ. ತೆರಿಗೆ ಕಡಿತದಿಂದ ಶ್ರೀಮಂತರು ಲಾಭ ಮಾಡಿಕೊಳ್ಳುತ್ತಾರೆ. ಬಡವರನ್ನು ಅವರಷ್ಟಕ್ಕೇ ಬಿಟ್ಟು ಬಿಡಲಾಗುತ್ತದೆ ಎಂದು ಸಿಬಲ್ ತಿಳಿಸಿದ್ದಾರೆ.