ನೀರಿನ ಪಂಪ್ ಕದ್ದ ಆರೋಪ: ದಲಿತನ ಥಳಿಸಿ ಕೊಂದರು
ಕೋಟ,ಸೆ.22: ನೀರಿನ ಪಂಪ್ ಕಳವುಗೈದಿದ್ದಾನೆ ಎಂದು ಆರೋಪಿಸಿ 40ರ ಹರೆಯದ ದಲಿತ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಘಟನೆ ರಾಜಸ್ಥಾನದ ಜಲವರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ಗದ್ದೆಯಿಂದ ನೀರಿನ ಪಂಪ್ ಕದ್ದಿದ್ದಾನೆ ಎಂದು ಆರೋಪಿಸಿದ ಗಟೋಲಿಯ 60ರ ಹರೆಯದ ವ್ಯಕ್ತಿ, ಆತನ ಇಬ್ಬರು ಮಕ್ಕಳು ಹಾಗೂ ಇತರ ಕೆಲವರು ಮೇವಖೇಡ ಗ್ರಾಮದ ದುಲಿಚಂದ್ ಮೀನ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ನೈನುರಾಮ್ ಮೀನ ತಿಳಿಸಿದ್ದಾರೆ.
ಆರೋಪಿಗಳನ್ನು ಪುರಿಲಾಲ್ ತನ್ವರ್, ಆತನ ಮಕ್ಕಳಾದ ದೇವಿ ಸಿಂಗ್ (23) ಮತ್ತು ಮೋಹನ್ (20) ಎಂದು ಗುರುತಿಸಲಾಗಿದೆ. ದುಲಿಚಂದ್ ತನ್ನ ಪಾಡಿಗೆ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ತಡೆದ ಆರೋಪಿಗಳು ಕಳವುಗೈಯ್ಯಲ್ಪಟ್ಟ ನೀರಿನ ಪೈಪ್ ಬಗ್ಗೆ ವಾಗ್ವಾದ ನಡೆಸಲು ಆರಂಭಿಸಿದರು. ನಂತರ ಕುಪಿತಗೊಂಡ ಆರೋಪಿಗಳು ದುಲಿಚಂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ದುಲುಚಂದ್ ಅವರ ತಂದೆ ಗಂಭೀರವಾಗಿ ಗಾಯಗೊಂಡಿದ್ದ ಮಗನನ್ನು ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಅವರ ಆರೋಗ್ಯಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿನ ವೈದ್ಯರು ದುಲಿಚಂದ್ ಅದಾಗಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೈಪ್ ಕಳವಾಗಿರುವ ಬಗ್ಗೆ ಆರೋಪಿ ತನ್ವರ್ ಶುಕ್ರವಾರವೇ ದುಲಿಚಂದ್ ತಂದೆಗೆ ತಿಳಿಸಿದಾಗ ಅವರು ತನ್ನ ಮಗನನ್ನು ತರಾಟೆಗೆ ತೆಗೆದುಕೊಂಡಿದ್ದರು ಮತ್ತು ಆತನ ವಿರುದ್ಧ ಪೊಲೀಸರಿಗೆ ದೂರು ನೀಡುವಂತೆ ತನ್ವರ್ಗೆ ತಿಳಿಸಿದ್ದರು ಎಂದು ಮೀನ ತಿಳಿಸಿದ್ದಾರೆ.