ಬಹುಕೋಟಿ ಶ್ರದ್ಧಾ ಚಿಟ್ ಫಂಡ್ ಹಗರಣ: ಸಿಬಿಐ ಪೀಡಿಸುತ್ತಿದೆ ಎಂದ ರಾಜೀವ್ ಕುಮಾರ್
ಕೋಲ್ಕತ್ತಾ, ಸೆ. 24: ಬಹುಕೋಟಿ ಶ್ರದ್ಧಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಕೊಲ್ಕತ್ತಾ ಉಚ್ಚ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿದ ಸಂದರ್ಭ ಕೋಲ್ಕತ್ತಾದ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್, ‘ಸಿಬಿಐ ತನ್ನನ್ನು ಪೀಡಿಸಿದೆ’ ಎಂದು ಮಂಗಳವಾರ ಹೇಳಿದ್ದಾರೆ.
ತನ್ನ ರಜೆ ಬುಧವಾರ ಮುಗಿಯಲಿದೆ. ಆದುದರಿಂದ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಪ್ರಸ್ತುತ ಪಶ್ಚಿಮಬಂಗಾಳ ಸಿಐಡಿಯ ಹೆಚ್ಚುವರಿ ಪ್ರಧಾನ ನಿರ್ದೇಶಕರಾಗಿರುವ ರಾಜೀವ್ ಕುಮಾರ್ ಹೇಳಿದ್ದಾರೆ. ನ್ಯಾಯಮೂರ್ತಿ ಎಸ್. ಮುನ್ಶಿ ಉಪಸ್ಥಿತರಿದ್ದ ವಿಭಾಗೀಯ ನ್ಯಾಯ ಪೀಠದ ಮುಂದೆ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದ ರಾಜೀವ್ ಕುಮಾರ್ ಪರ ವಕೀಲ ದೇಬಾಸಿಶ್ ರಾಯ್, ‘‘ಸಿಬಿಐ ತನ್ನ ಕಕ್ಷಿದಾರನನ್ನು ಪೀಡಿಸುತ್ತಿದೆ’’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹ ನ್ಯಾಯಾಧೀಶ ನ್ಯಾಯಮೂರ್ತಿ ಎಸ್. ದಾಸ್ಗುಪ್ತಾ, ‘‘ಹೋಗಿ ಶರಣಾಗಿ’’ ಎಂದರು. ಅನಂತರ ವಿಭಾಗೀಯ ನ್ಯಾಯಪೀಠ ರಾಜೀವ್ ಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಬುಧವಾರಕ್ಕೆ ನಿಗದಿಪಡಿಸಿತು. ಈ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸೋಮವಾರ ಸಲ್ಲಿಸಲಾಗಿತ್ತು.
ರಾಜೀವ್ ಕುಮಾರ್ ಅವರಿಗಾಗಿ ಶೋಧ ನಡೆಸುತ್ತಿರುವ ಸಂದರ್ಭ ಕೋಲ್ಕೊತ್ತಾದ ಪಾರ್ಕ್ ಸ್ಟ್ರೀಟ್ನಲ್ಲಿರುವ ಅವರ ಅಧಿಕೃತ ನಿವಾಸ ಸೇರಿದಂತೆ ಹಲವು ಸ್ಥಳಗಳಲ್ಲಿ ಸಿಬಿಐ ಹುಡುಕಾಟ ನಡೆಸಿತ್ತು. ರಾಜೀವ್ ಕುಮಾರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಅಲಿಪೋರಾ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಸೆಪ್ಟಂಬರ್ 21ರಂದು ತಿರಸ್ಕರಿಸಿತ್ತು.