ತನ್ನದೇ ಪಕ್ಷದ ಸರಕಾರದ ವಿರುದ್ಧ ಮತ್ತೆ ಕಾಂಗ್ರೆಸ್ ನಾಯಕ ಸಿಂಧಿಯಾ ಆಕ್ರೋಶ
ಭೋಪಾಲ,ಸೆ.25: ರಾಜ್ಯದ ಹಲವು ಭಾಗಗಳಲ್ಲಿ ನೆರೆ ಮತ್ತು ಪ್ರವಾಹದಿಂದಾಗಿ ಬೆಳೆ ನಷ್ಟದ ಪ್ರಮಾಣವನ್ನು ಅಂದಾಜಿಸಲು ಮಧ್ಯಪ್ರದೇಶದ ಕಾಂಗ್ರೆಸ್ ನಡೆಸಿದ್ದ ಸಮೀಕ್ಷೆಯನ್ನು ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಟೀಕಿಸಿದ್ದಾರೆ. ತನ್ಮೂಲಕ ಪಕ್ಷದ ವಿರುದ್ಧ ಇನ್ನೊಂದು ದಾಳಿಯನ್ನು ನಡೆಸಿದ್ದಾರೆ.
ಮಂದಸೌರ ಮತ್ತು ನೀಮುಚ್ ಜಿಲ್ಲೆಗಳಲ್ಲಿ ನೆರೆಯಿಂದ ಉಂಟಾಗಿರುವ ಹಾನಿಯನ್ನು ಲೆಕ್ಕ ಹಾಕಲು ಮುಖ್ಯಮಂತ್ರಿ ಕಮಲ್ ನಾಥ್ ಅವರು ಈ ಸಮೀಕ್ಷೆಗೆ ಆದೇಶಿಸಿದ್ದರು.
ಮಂಗಳವಾರ ಪ್ರವಾಹಪೀಡಿತ ಜಿಲ್ಲೆಗಳಿಗೆ ಭೇಟಿ ಸಂದರ್ಭ ರೈತರೊಂದಿಗೆ ಮಾತನಾಡಿದ ಸಿಂಧಿಯಾ,ರಾಜ್ಯ ಸರಕಾರವು ರೈತರ ಬೆನ್ನಿಗೆ ನಿಲ್ಲಬೇಕು. ಈ ಅಗತ್ಯ ಸಂದರ್ಭದಲ್ಲಿ ಪ್ರಾಥಮಿಕ ಸಮೀಕ್ಷೆಯು ತನಗೆ ಅತೃಪ್ತಿಯನ್ನುಂಟು ಮಾಡಿದೆ. ಈಗ ಅನುಕೂಲಕರ ಹವಾಮಾನವಿದೆ ಮತ್ತು ಇನ್ನೊಮ್ಮೆ ಸಮೀಕ್ಷೆಯನ್ನು ನಡೆಸಬೇಕು. ವಾಸ್ತವ ನಷ್ಟವನ್ನು ತಿಳಿದುಕೊಳ್ಳಲು ಕಂದಾಯ ಅಧಿಕಾರಿಗಳು ಮತ್ತು ತಹಶೀಲ್ದಾರರು ರೈತರ ಹೊಲಗಳಿಗೆ ಭೇಟಿ ನೀಡಬೇಕು ಮತ್ತು ನಷ್ಟಕ್ಕೆ ಅನುಗುಣವಾಗಿ ಪರಿಹಾರವನ್ನು ವಿತರಿಸಬೇಕು ಎಂದರು.
ಶೇ.100ರಷ್ಟು ಬೆಳೆ ನಷ್ಟವಾಗಿರುವಾಗ ಸಮೀಕ್ಷೆಯ ಅಗತ್ಯವೇ ಇರಲಿಲ್ಲ ಎಂದು ಅವರು ಹೇಳಿದರು.