ಚಿನ್ಮಯಾನಂದನಿಗೆ ಕಣ್ಣಿನ ಸಮಸ್ಯೆ ?
ಲಕ್ನೋ/ಶಹಾಜಹಾನ್ಪುರ, ಅ. 1: ಲಕ್ನೋ ಆಸ್ಪತ್ರೆಯಿಂದ ಸೋಮವಾರ ಬಿಡುಗಡೆಯಾದ ಬಳಿಕ ಕೇಂದ್ರದ ಮಾಜಿ ಸಚಿವ ಚಿನ್ಮಯಾನಂದ ಕಣ್ಣಿನ ಸಮಸ್ಯೆ ಕಾರಣಕ್ಕೆ ನಗರದಲ್ಲಿರುವ ಇನ್ನೊಂದು ಆಸ್ಪತ್ರೆಗೆ ಭೇಟಿ ನೀಡಿದರು. ಆದರೆ, ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರಪ್ರದೇಶದ ಶಾಹಜಹಾನ್ಪುರದ ಕಾನೂನು ವಿದ್ಯಾರ್ಥಿನಿಯಿಂದ ಅತ್ಯಾಚಾರ ಆರೋಪಕ್ಕೆ ಒಳಗಾಗಿರುವ ಚಿನ್ಮಯಾನಂದನನ್ನು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾನಿಲಯ (ಕೆಜಿಎಂಯು)ದ ವೈದ್ಯರು ಪರಿಶೀಲನೆ ನಡೆಸಿದರು ಹಾಗೂ ಅಕ್ಟೋಬರ್ 16ರಂದು ತಪಾಸಣೆಗೆ ಆಗಮಿಸುವಂತೆ ತಿಳಿಸಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ‘‘ಕಣ್ಣಿನ ಸಮಸ್ಯೆ ಕಾರಣಕ್ಕೆ ಚಿನ್ಮಯಾನಂದ ಸೋಮವಾರ ರಾತ್ರಿ ಕೆಜಿಎಂಯುಗೆ ಆಗಮಿಸಿದರು. ಅವರನ್ನು ಪರಿಶೀಲಿಸಲಾಯಿತು ಹಾಗೂ ಅಕ್ಟೋಬರ್ 16ರಂದು ತಪಾಸಣೆಗೆ ಆಗಮಿಸುವಂತೆ ತಿಳಿಸಲಾಯಿತು’’ ಎಂದು ಕೆಜಿಎಂಯು ಮಾಧ್ಯಮ ಉಸ್ತುವಾರಿ ಡಾ. ಸಂದೀಪ್ ಕುಮಾರ್ ಹೇಳಿದ್ದಾರೆ. ಕೆಜಿಎಂಯುನಲ್ಲಿ ದಾಖಲಾಗಲು ಚಿನ್ಮಯಾನಂದ ಬಯಸಿದ್ದಾನೆ. ಆದರೆ, ಆತನಿಗೆ ಮತ್ತೆ ಬರಲು ತಿಳಿಸಲಾಗಿದೆ. ಅನಂತರ ಆತ ಬೆಳಗ್ಗೆ 2.30ಕ್ಕೆ ಜೈಲು ತಲುಪಿದ ಎಂದು ಮೂಲಗಳು ತಿಳಿಸಿವೆ. ಕೆಜಿಎಂಯುನಲ್ಲಿ ದಾಖಲಾಗಲು ಚಿನ್ಮಯಾನಂದ ಪ್ರಯತ್ನಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಲು ಡಾ. ಕುಮಾರ್ ನಿರಾಕರಿಸಿದ್ದಾರೆ.