ಬಾಲಕೋಟ್ ವೈಮಾನಿಕ ದಾಳಿಯಲ್ಲಿ ಪಾಲ್ಗೊಂಡ ಅಭಿನಂದನ್ ರ 51 ಸ್ಕ್ವಾಡ್ರನ್ಗೆ ಪ್ರಶಂಸಾ ಪುರಸ್ಕಾರ
ಹೊಸದಿಲ್ಲಿ, ಅ. 6: ಪಾಕಿಸ್ತಾನದ ವೈಮಾನಿಕ ದಾಳಿ ನಿಗ್ರಹಿಸಿರುವುದು ಹಾಗೂ ಫೆಬ್ರವರಿ 27ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಹೊಡೆದುರುಳಿಸಿದ ಹಿನ್ನೆಲೆಯಲ್ಲಿ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಅವರು ಭಾರತೀಯ ವಾಯು ಪಡೆ (ಐಎಎಫ್) ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ನ 51 ಸ್ಕ್ವಾಡ್ರನ್ಗೆ ಪ್ರಶಂಸಾ ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಈ ಪ್ರಶಸ್ತಿಯನ್ನು ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಸತೀಶ್ ಪವಾರ್ ಅಕ್ಟೋಬರ್ 8ರಂದು ಸ್ವೀಕರಿಸಲಿದ್ದಾರೆ.
ಬಾಲಕೋಟ್ ವೈಮಾನಿಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿದ ಸಂದರ್ಭ ಅಭಿನಂದನ್ ಚಲಾಯಿಸುತ್ತಿದ್ದ ಮಿಗ್-21 ಬಿಸನ್ ಯುದ್ಧ ವಿಮಾನ ಪಾಕಿಸ್ತಾನ ಆಕ್ರಮಿತ ಪ್ರದೇಶದ ಒಳಗೆ ಪ್ರವೇಶಿಸಿತ್ತು.
ಪಾಕಿಸ್ತಾನದ ವಾಯು ಪಡೆಯ ಎಫ್-16ನೊಂದಿಗೆ ವೈಮಾನಿಕ ಘರ್ಷಣೆ ಸಂದರ್ಭ ಮಿಗ್-21 ಪತನಗೊಂಡಿತ್ತು. ಈ ಸಂದರ್ಭ ವರ್ತಮಾನ್ ಹೊರ ಹಾರಿದ್ದರು. ಪಾಕಿಸ್ತಾನ ಆಕ್ರಮಿತ ಪ್ರದೇಶ ಪ್ರವೇಶಿಸಿದ್ದ ಅಭಿನಂದನ್ ಅವರನ್ನು ಭಾರತ ಹಾಗೂ ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ಬಳಿಕ ಬಿಡುಗಡೆ ಮಾಡಲಾಗಿತ್ತು. ಅವರಿಗೆ ದೇಶದ 73ನೇ ಸ್ವಾತಂತ್ರ ದಿನಾಚರಣೆಯಂದು ದೇಶದ ಮೂರನೇ ಅತಿ ಶ್ರೇಷ್ಠ ಶೌರ್ಯ ಪ್ರಶಸ್ತಿಯಾದ ‘ವೀರ ಚಕ್ರ’ ಪ್ರದಾನ ಮಾಡಲಾಗಿತ್ತು.
ಬಾಲಕೋಟ್ ವೈಮಾನಿಕ ದಾಳಿ ಹಾಗೂ ಫೆಬ್ರವರಿಯಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿ ವಿಫಲಗೊಳಿಸಿರುವಲ್ಲಿ ತನ್ನ ಪಾತ್ರಕ್ಕಾಗಿ ಸ್ಕ್ವಾಡ್ರನ್ ನಾಯಕ ಮಿಂಟಿ ಅಗರ್ವಾಲ್ರ 601 ಸಿಗ್ನಲ್ ಯೂನಿಟ್ ಕೂಡ ಪ್ರಶಂಸಾ ಪುರಸ್ಕಾರಕ್ಕೆ ಪಾತ್ರವಾಗಿದೆ.
ಫೆಬ್ರವರಿ 26ರಂದು ನಡೆದ ಬಾಲಕೋಟ್ ವೈಮಾನಿಕ ದಾಳಿಯಲ್ಲಿ 9 ಸ್ಕ್ವಾಡ್ರನ್ ಅನ್ನು ಕೊಂಡೊಯ್ದ ಮಿರೇಜ್ 2000 ಯುದ್ಧ ವಿಮಾನ ಕೂಡ ಪ್ರಶಂಸಾ ಪ್ರಶಸ್ತಿಗೆ ಪಾತ್ರವಾಗಿದೆ.