ರೈಲ್ವೇ ಖಾಸಗೀಕರಣ: ತಜ್ಞರ ತಂಡ ರಚಿಸಲು ಕೇಂದ್ರ ನಿರ್ಧಾರ
ಹೊಸದಿಲ್ಲಿ,ಅ.10: ದೇಶದ 400 ರೈಲ್ವೇ ನಿಲ್ದಾಣಗಳ ಪುನರ್ಅಭಿವೃದ್ಧಿ ಕಾಮಗಾರಿಯಲ್ಲಿ ವಿಳಂಬ ಮತ್ತು 150 ರೈಲುಗಳು ಮತ್ತು 50 ರೈಲ್ವೇ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯನ್ನು ಶೀಘ್ರಗೊಳಿಸಲು ಸೂಕ್ತ ನೀಲಿನಕ್ಷೆ ರಚಿಸಲು ತಜ್ಞರ ಕ್ರಿಯಾ ತಂಡವನ್ನು ರಚಿಸಲು ಕೇಂದ್ರ ನಿರ್ಧರಿಸಿದೆ.
ಈ ಕುರಿತು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ರೈಲ್ವೇ ಮಂಡಳಿ ಮುಖ್ಯಸ್ಥ ವಿ.ಕೆ ಯಾದವ್ ಅವರಿಗೆ ಬರೆದ ಪತ್ರದಲ್ಲಿ ಅಸಮಾಧಾನ ತೋಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂತ್ ಮತ್ತು ಯಾದವ್ ಸೇರಿದಂತೆ ವಿತ್ತೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಮತ್ತು ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯೂ ಈ ತಂಡದ ಭಾಗವಾಗಿರಲಿದ್ದಾರೆ. ದೇಶಸ 400 ರೈಲ್ವೇ ನಿಲ್ದಾಣಗಳನ್ನು ಪುನರ್ಅಭಿವೃದ್ಧಿಗೊಳಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು ಸದ್ಯ ಕೆಲವೇ ನಿಲ್ದಾಣಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಅಮಿತಾಬ್ ಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಜಿನಿಯರಿಂಗ್ ರೈಲ್ವೇ ಮಂಡಳಿಯ ಮತ್ತು ಸಂಚಾರಿ ರೈಲ್ವೇ ಮಂಡಳಿ ವಿಭಾಗದ ಸದಸ್ಯರೂ ಈ ತಜ್ಞರ ತಂಡದ ಸದಸ್ಯರಾಗಿರಬೇಕು ಎಂದು ನೀತಿ ಆಯೋಗದ ಮುಖ್ಯಸ್ಥರು ತಿಳಿಸಿದ್ದಾರೆ.