ಜಮ್ಮು-ಕಾಶ್ಮೀರದಲ್ಲಿ ಪ್ರಜಾಸತ್ತೆ ಎತ್ತಿಹಿಡಿಯಲು ರಾಷ್ಟ್ರಪತಿಗಳ ಮಧ್ಯಪ್ರವೇಶ ಕೋರಿದ ಎನ್ಪಿಪಿ
ಜಮ್ಮು,ಅ.13: ಬಿಜೆಪಿಯು ಜಮ್ಮು-ಕಾಶ್ಮೀರದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿರುವ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿ(ಎನ್ಪಿಪಿ)ಯು,ರಾಜ್ಯದಲ್ಲಿ ‘ಸಂವಿಧಾನಾತ್ಮಕ ಖಾತರಿಗಳನ್ನು’ ಎತ್ತಿ ಹಿಡಿಯಲು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಧ್ಯಪ್ರವೇಶಿಸಬೇಕೆಂದು ಕೋರಿದೆ.
ಅ.24ರಂದು ನಿಗದಿಯಾಗಿರುವ ಬ್ಲಾಕ್ ಅಭಿವೃದ್ಧಿ ಮಂಡಳಿಗಳ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಬೇಕು ಹಾಗೂ ಎಲ್ಲ ಪ್ರತಿಪಕ್ಷಗಳಿಗೆ ಸೂಕ್ತ ರಾಜಕೀಯ ಅವಕಾಶ ದೊರೆಯುವಂತೆ ನೋಡಿಕೊಳ್ಳಬೇಕು ಎಂದೂ ಅದು ಕರೆ ನೀಡಿದೆ.
ಆಡಳಿತ ಬಿಜೆಪಿಯು ಪ್ರತಿಪಕ್ಷಗಳಿಗೆ ಸೂಕ್ತ ರಾಜಕೀಯ ಅವಕಾಶಗಳನ್ನು ನಿರಾಕರಿಸುವುದರೊಂದಿಗೆ ರಾಜ್ಯವು ಏಕಪಕ್ಷ ವ್ಯವಸ್ಥೆಯೆಡೆಗೆ ಸಾಗುತ್ತಿದೆ ಎಂಬ ವ್ಯಾಪಕ ಭಾವನೆಗಳಿವೆ. ರಾಜ್ಯದಲ್ಲಿ ಪ್ರಜಾಪ್ರಭುತ್ವವು ಉಸಿರಾಡಲೂ ಕಷ್ಟಪಡುತ್ತಿದ್ದು,ಕೃತಕ ಜೀವರಕ್ಷಕ ಯಂತ್ರವನ್ನು ಅಳವಡಿಸಿದಂತಿದೆ ಎಂದು ಎನ್ಪಿಪಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಹರ್ಷದೇವ ಸಿಂಗ್ ಅವರು ರವಿವಾರ ರಾಷ್ಟ್ರಪತಿ ಭವನಕ್ಕೆ ಸಲ್ಲಿಸಿರುವ ಅಹವಾಲಿನಲ್ಲಿ ಹೇಳಿದ್ದಾರೆ.