ಅಯೋಧ್ಯೆ ವಿಚಾರಣೆ: ಎಲ್ಲ ಪ್ರಶ್ನೆಗಳನ್ನು ಮುಸ್ಲಿಂ ಕಕ್ಷಿದಾರರಿಗೆ ಯಾಕೆ ಕೇಳಲಾಗುತ್ತಿದೆ?
ಸುಪ್ರೀಂ ಕೋರ್ಟ್ ಪೀಠದ ಮುಂದೆ ನ್ಯಾಯವಾದಿ ಪ್ರಶ್ನೆ
ಹೊಸದಿಲ್ಲಿ, ಅ. 14: ಎಲ್ಲ ಪ್ರಶ್ನೆಗಳನ್ನು ಮುಸ್ಲಿಂ ಕಕ್ಷಿದಾರರಲ್ಲೇ ಕೇಳಲಾಗುತ್ತದೆ ಯಾಕೆ ?, ಇತರ ಕಕ್ಷಿದಾರರಲ್ಲಿ ಕೇಳುತ್ತಿಲ್ಲ ಯಾಕೆ? ಎಂದು ಅಯೋಧ್ಯೆ ಭೂ ವಿವಾದ ಪ್ರಕರಣದಲ್ಲಿ ಮುಸ್ಲಿಂ ಕಕ್ಷಿದಾರರನ್ನು ಪ್ರತಿನಿಧಿಸಿರುವ ನ್ಯಾಯವಾದಿ ರಾಜೀವ್ ಧವನ್ ಸುಪ್ರೀಂ ಕೋರ್ಟ್ನ ಪೀಠದ ಮುಂದೆ ಪ್ರಶ್ನಿಸಿದ್ದಾರೆ.
ಅಯೋಧ್ಯೆ ಭೂ ವಿವಾದ ಸುಪ್ರೀಂ ಕೋರ್ಟ್ನಲ್ಲಿ ಕೊನೆಯ ಹಂತಕ್ಕೆ ಬಂದಿದೆ. ಈ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಅಂತಿಮ ಗಡು ಅಕ್ಟೋಬರ್ 17. ಮುಸ್ಲಿಂ ಕಕ್ಷಿದಾರರು ಸೋಮವಾರ ತಮ್ಮ ವಾದ ಅಂತ್ಯಗೊಳಿಸಿದ್ದಾರೆ.
‘‘ವಿಚಾರಣೆ ಸಂದರ್ಭ ಕೆಲವು ಆಸಕ್ತಿದಾಯಕ ವಿಚಾರಗಳನ್ನು ನಾನು ಗಮನಿಸಿದೆ. ನಿಮ್ಮ ಎಲ್ಲ ಪ್ರಶ್ನೆಗಳು ಮುಸ್ಲಿಂ ಕಕ್ಷಿದಾರರನ್ನು ಗುರಿಯಾಗಿರಿಸಿವೆ. ಅವರಲ್ಲೂ ಕೆಲವು ಪ್ರಶ್ನೆಗಳನ್ನು ಕೇಳಬಹುದಿತ್ತು’’ ಎಂದು ರಾಜೀವ್ ಧವನ್ ಹೇಳಿದ್ದಾರೆ.
ಆದರೆ, ಮುಸ್ಲಿಂ ಕಕ್ಷಿದಾರರ ಪರ ವಕೀಲರ ಹೇಳಿಕೆಯನ್ನು ನ್ಯಾಯಾಲಯ ನಿರ್ಲಕ್ಷಿಸಿತು ಹಾಗೂ ನಿಮ್ಮಲ್ಲಿ ಕೇಳಲಾದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದಿತು.
ರಾಮ್ ಲಲ್ಲಾ ಪರವಾಗಿ ಹಾಜರಾದ ಹಿರಿಯ ವಕೀಲ ಸಿ.ಎಸ್. ವೈದ್ಯನಾಥ್ ಅವರು, ರಾಜೀವ್ ಧವನ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು ಹಾಗೂ ಇದು ಅನಗತ್ಯದ ಹೇಳಿಕೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜೀವ್ ಧವನ್, ‘‘ಇದು ಅನಗತ್ಯ ಹೇಳಿಕೆ ಅಲ್ಲ. ನಾನು ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲು ಬದ್ದನಾಗಿದ್ದೇನೆ. ಆದರೆ, ಎಲ್ಲ ಪ್ರಶ್ನೆಗಳನ್ನೂ ಮುಸ್ಲಿಂ ಕಕ್ಷಿದಾರರಲ್ಲಿ ಕೇಳಲಾಗುತ್ತದೆ ಯಾಕೆ ?’’ ಎಂದರು.