"ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ, ಆದಿತ್ಯನಾಥ್ ಸರಕಾರ ಭದ್ರತೆ ಹಿಂಪಡೆದಿದೆ"
ಕೊನೆ ವಿಡಿಯೋದಲ್ಲಿ ಆರೋಪಿಸಿದ್ದ ಹಿಂದೂ ಸಮಾಜ ಪಕ್ಷದ ನಾಯಕ ಕಮಲೇಶ್ ತಿವಾರಿ
ಲಕ್ನೋ, ಅ.19: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಹಿಂದೂ ಸಮಾಜ ಪಕ್ಷದ ನಾಯಕ ಕಮಲೇಶ್ ತಿವಾರಿ ತನ್ನ ಹತ್ಯೆಗೆ ಸಂಚು ನಡೆದಿದೆ ಮತ್ತು ಆದಿತ್ಯನಾಥ್ ಸರಕಾರ ತನ್ನ ಭದ್ರತೆಯನ್ನು ಹಿಂದಕ್ಕೆ ಪಡೆದಿದೆ ಎಂದು ಹೇಳಿರುವ ಫೇಸ್ ಬುಕ್ ವಿಡಿಯೋವೊಂದು ವೈರಲ್ ಆಗುತ್ತಿದೆ.
ಹತ್ಯೆಯಾಗುವುದಕ್ಕೂ ಮೊದಲಿನ ವಿಡಿಯೋ ಇದಾಗಿದ್ದು, ಈ ವಿಡಿಯೋದಲ್ಲಿ ಅವರು ತಾನು ಹಿಂದೂಗಳಿಗಾಗಿ ಹೋರಾಟ ಮಾಡುತ್ತಿದ್ದೇನೆ. ತಾನು ಬಿಜೆಪಿ ಅಥವಾ ಸಂಘಪರಿವಾರದ ಕಾರ್ಯಕರ್ತರನ್ನು ಬೇರೆಯಾಗಿ ನೋಡುವುದಿಲ್ಲ ಎಂದು ಹೇಳುತ್ತಾರೆ.
ವಿಡಿಯೋದಲ್ಲಿ ಮಾತನಾಡುವ ಕಮಲೇಶ್ ತಿವಾರಿ, "ಸಂಘದ, ಬಿಜೆಪಿಯ ಪದಾಧಿಕಾರಿ ಅಥವಾ ಕಾರ್ಯಕರ್ತರು ಹತ್ಯೆಗೀಡಾದಾಗ ನಾನು ಅವರು ಸಂಘದವರು ಅಥವಾ ಬಿಜೆಪಿಯವರು ಎಂದು ಆಲೋಚಿಸುವುದಿಲ್ಲ. ನಾವು ಸುಮ್ಮನಿರುವುದಿಲ್ಲ. ಹತ್ಯೆಯಾದವರು ಹಿಂದೂಗಳು ಎಂದು ಮಾತ್ರ ನಾವು ಆಲೋಚಿಸುತ್ತೇವೆ. ಸಂಘ ಮತ್ತು ಬಿಜೆಪಿಯ ಕಾರ್ಯಕರ್ತರ ಬಗ್ಗೆಯೂ ನನಗೆ ನೋವಾಗುತ್ತದೆ ಮತ್ತು ನಾನು ಅವರ ಪರವಾಗಿ ಹೋರಾಟ ನಡೆಸುತ್ತೇನೆ. ಈ ಹರಾಮುಕೋರರು ನನ್ನ ಹಿಂದೆ ದಿನ, ರಾತ್ರಿ ಬಿದ್ದಿದ್ದಾರೆ. ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ. ಯೋಗಿ ಸರಕಾರ ಬರುತ್ತಲೇ ನನ್ನ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದೆ. ಆದರೂ ನಾನು ಹೋರಾಡುತ್ತಿದ್ದೇನೆ. ನಾನು ಹಿಂದೂಗಳಿಗಾಗಿ ಹೋರಾಟ ನಡೆಸುತ್ತೇನೆ" ಎಂದು ಹೇಳಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.