ಕಾಶ್ಮೀರದಲ್ಲಿ ಪಾಕ್ ಪಡೆಯಿಂದ ಕದನ ವಿರಾಮ ಉಲ್ಲಂಘಿಸಿ ದಾಳಿ
ಇಬ್ಬರು ಸೈನಿಕರು ಸೇರಿ ಮೂವರು ಮೃತ್ಯು
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಲ್ಲೆಯಲ್ಲಿ ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಸೈನಿಕರು ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಮೂವರು ಗಾಯಗೊಂಡಿದ್ದಾರೆ. ಕುಪ್ವಾರಾ ಜಿಲ್ಲೆಯ ತಂಗಹಾರ್ ಎಂಬಲ್ಲಿ ಈ ಘಟನೆ ನಡೆದಿದ್ದು, ಎರಡು ಮನೆಗಳು ಹಾನಿಗೀಡಾಗಿವೆ.
ಈ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ಸೂಕ್ತ ಪ್ರತಿ ದಾಳಿ ನಡೆಸಿದೆ. ಕಟೂವಾದಲ್ಲಿ ಅಂತರ್ ರಾಷ್ಟ್ರೀಯ ಗಡಿಯುದ್ದಕ್ಕೂ ಪರಸ್ಪರ ಸೇನೆಗಳ ನಡುವೆ ಗುಂಡಿನ ದಾಳಿ ನಡೆದಿವೆ ಎಂದು ಸೇನೆಯ ಮೂಲಗಳು ಹೇಳಿವೆ.
ಕಳೆದ ವಾರ ವಾಸ್ತವ ನಿಯಂತ್ರಣ ರೇಖೆಯ ಬಾರಾಮುಲ್ಲಾ ಮತ್ತು ರಾಜೌರಿಯಲ್ಲಿ ಪಾಕಿಸ್ತಾನ ಪಡೆಗಳು ನಡೆಸಿದ ಎರಡು ಪ್ರತ್ಯೇಕ ದಾಳಿಗಳಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿದ್ದರು.
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾಗುತ್ತಿ ರುವುದು ಹೆಚ್ಚಿದ್ದು, ಈ ಬಗ್ಗೆ ಭಾರತ ಪಾಕಿಸ್ತಾನಕ್ಕೆ ಆಕ್ಷೇಪ ಸಲ್ಲಿಸಿದೆ.
Next Story