ನಿಮ್ಮ ಕೊಡುಗೆಯನ್ನು ಲಕ್ಷಾಂತರ ಜನರು ಪ್ರಶಂಸಿಸುತ್ತಿದ್ದಾರೆ: ಅಭಿಜಿತ್ ಬ್ಯಾನರ್ಜಿಗೆ ರಾಹುಲ್ ಗಾಂಧಿ
ಹೊಸದಿಲ್ಲಿ, ಅ. 20: ತನ್ನ ವೃತ್ತಿಪರತೆ ಪ್ರಶ್ನಿಸಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ನೊಬೆಲ್ ಪ್ರಶಸ್ತಿ ಗೌರವಾನ್ವಿತ ಅಭಿಜಿತ್ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
‘‘ದಯವಿಟ್ಟು ಲಕ್ಷಾಂತರ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ ಎಂಬುದನ್ನು ದೃಢಪಡಿಸಿಕೊಳ್ಳಿ’’ ಎಂದು ರಾಹುಲ್ ಗಾಂಧಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹೇಳಿದ್ದಾರೆ. ಅಭಿಜಿತ್ ಬ್ಯಾನರ್ಜಿ ಅವರು ಕಾಂಗ್ರೆಸ್ನ ನ್ಯಾಯ್ ಯೋಜನೆಯನ್ನು ಪ್ರಶಂಸಿಸುತ್ತಿರುವುದು ಅವರು ಸಂಪೂರ್ಣವಾಗಿ ಎಡಪಂಥೀಯ ಚಿಂತನೆಯತ್ತ ವಾಲಿರುವುದನ್ನು ಬಹಿರಂಗಗೊಳಿಸಿದೆ. ಅವರ ಕೊಡುಗೆ ಭಾರತದ ಜನರಿಂದ ತಿರಸ್ಕೃತವಾಗಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಶುಕ್ರವಾರ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆಯಾಗಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
‘‘ಆತ್ಮೀಯ ಬ್ಯಾನರ್ಜಿ ಅವರೇ, ಗೋಯಲ್ ಅವರು ದ್ವೇಷದಿಂದ ಕುರುಡಾಗಿದ್ದಾರೆ ಹಾಗೂ ಅವರಿಗೆ ವೃತ್ತಿಪರತೆ ಬಗ್ಗೆ ಯಾವುದೇ ನಿಲುವು ಇಲ್ಲ. ನೀವು ಒಂದು ದಶಕದಿಂದ ಅದನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದರು ಕೂಡ ಅವರಿಗೆ ಮನವರಿಕೆ ಮಾಡಲು ಸಾಧ್ಯವಿಲ್ಲ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.