ತಿಹಾರ್ ಜೈಲಿನಲ್ಲಿ ಡಿಕೆ ಶಿವಕುಮಾರ್ ಭೇಟಿಯಾದ ಸೋನಿಯಾ ಗಾಂಧಿ
ಇಂದು ಡಿಕೆಶಿ ಜಾಮೀನು ಅರ್ಜಿ ತೀರ್ಪು
ಹೊಸದಿಲ್ಲಿ, ಅ.23: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಪಕ್ಷದ ಸಹೋದ್ಯೋಗಿ ಅಂಬಿಕಾ ಸೋನಿ ಜೊತೆ ಇಂದು ಬೆಳಗ್ಗೆ ದಿಲ್ಲಿಯ ತಿಹಾರ್ ಜೈಲಿಗೆ ತೆರಳಿ ಕನಕಪುರದ ಶಾಸಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದರು.
ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಕಾಂಗ್ರೆಸ್ ನಾಯಕಿಯರ ಭೇಟಿಯ ವೇಳೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಅವರಿದ್ದರು.
ದಿಲ್ಲಿ ಹೈಕೋರ್ಟ್ ಶಿವಕುಮಾರ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ಇಂದು ತನ್ನ ತೀರ್ಪು ಪ್ರಕಟಿಸಲಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಈ.ಡಿ.) ಸೆಪ್ಟಂಬರ್ನಲ್ಲಿ ಶಿವಕುಮಾರ್ರನ್ನು ಬಂಧಿಸಿತ್ತು. ಶಿವಕುಮಾರ್ ತೆರಿಗೆ ವಂಚಿಸಿದ್ದಲ್ಲದೆ, ಕೋಟ್ಯಂತರ ರೂ. ವ್ಯವಹಾರ ನಡೆಸಿದ್ದಾರೆ ಎಂದು ಈ.ಡಿ. ತನಿಖಾಧಿಕಾರಿಗಳು ಆರೋಪಿಸಿದ್ದಾರೆ.
ಕರ್ನಾಟಕದ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಸೋಮವಾರ ತಿಹಾರ್ ಜೈಲಿಗೆ ತೆರಳಿ ಶಿವಕುಮಾರ್ರನ್ನು ಭೇಟಿಯಾಗಿದ್ದರು. ಶಿವಕುಮಾರ್ರನ್ನು ರಾಜಕೀಯ ಸೇಡಿಗಾಗಿ ಗುರಿ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು