ರಾಜಸ್ಥಾನ: ಮಹಾತ್ಮಾ ಗಾಂಧಿ ಪ್ರತಿಮೆಗೆ ಹಾನಿ
ಅಜ್ಮೀರ್, ಅ. 28: ರಾಜಸ್ಥಾನದ ಅಜ್ಮೀರ್ ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆಗೆ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಇಲ್ಲಿನ ಗಾಂಧಿ ಚೌಕದಲ್ಲಿ ರವಿವಾರ ರಾತ್ರಿ ಘಟನೆ ನಡೆದಿದೆ.
ಗಾಂಧೀಜಿ ಪ್ರತಿಮೆಯ ಮೇಲ್ಭಾಗಕ್ಕೆ ಹಾನಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸಾರ್ವಜನಿಕ ಸೊತ್ತಿಗೆ ಹಾನಿ ಹಾಗೂ ಐಪಿಎಸಿಯ ಇತರ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಸೀರಾಬಾದ್ ಎಸ್ಎಚ್ಒ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ. ದುಷ್ಕರ್ಮಿಗಳ ಗುರುತು ಪತ್ತೆ ಹಚ್ಚಲು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ತಿಂಗಳ ಆರಂಭದಲ್ಲಿ ಮಧ್ಯಪ್ರದೇಶದ ರೇವಾದಲ್ಲಿರುವ ಬಾಪು ಭವನದಿಂದ ಮಹಾತ್ಮಾ ಗಾಂಧಿ ಚಿತಾ ಭಷ್ಮವಿದ್ದ ತಾಮ್ರದ ಕಲಶವನ್ನು ದುಷ್ಕರ್ಮಿಗಳು ಕಳವುಗೈದಿದ್ದರು. ಇಲ್ಲಿನ ವಸ್ತು ಸಂಗ್ರಹಾಲಯದಲ್ಲಿದ್ದ ಮಹಾತ್ಮಾ ಗಾಂಧಿ ಕುರಿತ ಪೋಸ್ಟರ್ ಅನ್ನು ದುಷ್ಕರ್ಮಿಗಳು ವಿರೂಪಗೊಳಿಸಿ, ಹಸಿರು ಪೈಂಟ್ನಲಿ ‘ರಾಷ್ಟ್ರದ್ರೋಹಿ’ ಎಂದು ಬರೆದಿದ್ದರು.