ನಾಝಿ ಪ್ರೇಮಿಗಳಿಂದ ಕಾಶ್ಮೀರ ಭೇಟಿ: ಯುರೋಪ್ ನಿಯೋಗದ ವಿರುದ್ಧ ಉವೈಸಿ ಆಕ್ರೋಶ
ಹೊಸದಿಲ್ಲಿ, ಅ.29: ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿರುವ ಐರೋಪ್ಯ ಒಕ್ಕೂಟದ ಸಂಸದರ ನಿಯೋಗವು ಬಲಪಂಥೀಯ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವುದಕ್ಕಾಗಿ ಪ್ರತಿಪಕ್ಷಗಳು ಅದನ್ನು ಕಟುವಾಗಿ ಟೀಕಿಸಿವೆ. ತಮ್ಮ ಇಸ್ಲಾಮೊಫೋಬಿಕ್ (ಮುಸ್ಲಿಮರ ವಿರುದ್ಧ ಭೀತಿ ಅಥವಾ ದ್ವೇಷ) ಅಥವಾ ವಲಸಿಗರ ವಿರುದ್ಧ ಹೇಳಿಕೆಗಳಿಂದಾಗಿ ಪ್ರಸಿದ್ಧರಾಗಿರುವ ಬಲಪಂಥೀಯ ಪಕ್ಷಗಳ ನಾಯಕರೇ ನಿಯೋಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಐರೋಪ್ಯ ಒಕ್ಕೂಟದ ಸಂಸದರ ಅದ್ಭುತ ಆಯ್ಕೆ. ಇಸ್ಲಾಮೊಫೋಬಿಯಾ (ನಾಝಿ ಲವರ್ಸ್)ದಿಂದ ನರಳುತ್ತಿರುವ ಇವರೆಲ್ಲ ಮುಸ್ಲಿಂ ಬಾಹುಳ್ಯದ ಕಾಶ್ಮೀರ ಕಣಿವೆಗೆ ತೆರಳುತ್ತಿದ್ದಾರೆ ಎಂದು ಎಐಎಂಐಎಂ ವರಿಷ್ಠ ಅಸದುದ್ದೀನ್ ಉವೈಸಿ ಟ್ವೀಟಿಸಿದ್ದಾರೆ.
ನಿಯೋಗದಲ್ಲಿಯ ನಾಯಕರ ರಾಜಕೀಯ ಗುರುತಿಸುವಿಕೆಯನ್ನು ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಅವರೂ ಟೀಕಿಸಿದ್ದಾರೆ. ಇದು ಬಿಜೆಪಿಯೊಂದಿಗೆ ಸಂಬಂಧ ಹೊಂದಿರುವ ತೀವ್ರ ಬಲಪಂಥೀಯ ಫ್ಯಾಸಿಸ್ಟ್ ಪರ ಪಕ್ಷಗಳ ನಾಯಕರ ಅನಧಿಕೃತ ತಂಡವಾಗಿದೆ. ಕಾಶ್ಮೀರ ಭೇಟಿಗೆ ನಮ್ಮ ಸಂಸದರಿಗೆ ಏಕೆ ಅವಕಾಶ ನೀಡಲಾಗಿರಲಿಲ್ಲ ಮತ್ತು ನಿಯೋಗವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದು ಏಕೆ ಎನ್ನುವುದನ್ನು ಇದು ವಿವರಿಸುತ್ತದೆ. ಮೂವರು ಮುಖ್ಯಮಂತ್ರಿಗಳು ಮತ್ತು ಇತರ ಒಂದು ಸಾವಿರ ಜನರು ಬಂಧನದಲ್ಲಿದ್ದಾರೆ ಮತ್ತು ಭಾರತೀಯ ರಾಜಕೀಯ ಪಕ್ಷಗಳಿಗಿಂತ ಈ ತಂಡಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಟ್ವೀಟಿಸಿದ್ದಾರೆ.
ತನ್ನ ಕಾಶ್ಮೀರ ನೀತಿಗಾಗಿ ಸರಕಾರದ ವಿರುದ್ಧ ಜಾಗತಿಕ ಟೀಕೆಗಳು ಹೆಚ್ಚುತ್ತಿರುವಂತಿದೆ,ಈ ಹಿನ್ನೆಲೆಯಲ್ಲಿ ವಿವಿಧ ದೇಶಗಳ ತೀವ್ರ ಬಲಪಂಥೀಯ ಸಂಸದರ ತಂಡವು ವ್ಯಕ್ತಿಗತವಾಗಿ ಇಲ್ಲಿಗೆ ಆಗಮಿಸಿರುವಂತಿದೆ. ಇದೊಂದು ಅನಧಿಕೃತ,ಖಾಸಗಿ ನಿಯೋಗವಾಗಿದೆ. ನಮ್ಮ ಪ್ರಧಾನಿಗಳು ಅದನ್ನು ಭೇಟಿಯಾಗುತ್ತಾರೆ. ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರರು ಅದನ್ನು ಭೇಟಿಯಾಗುತ್ತಾರೆ ಎಂದು ಹಿರಿಯ ಸಿಪಿಎಂ ನಾಯಕ ನಿಲೋತ್ಪಲ ಬಸು ಹೇಳಿದರು.
ಐರೋಪ್ಯ ಒಕ್ಕೂಟದ ಸಂಸದರು ಕಾಶ್ಮೀರಕ್ಕೆ ಭೇಟಿ ನೀಡಲು ಅವಕಾಶ ನೀಡಿರುವ ಕೇಂದ್ರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು, ‘ಐರೋಪ್ಯ ಸಂಸದರು ಕಾಶ್ಮೀರಕ್ಕೆ ಭೇಟಿ ನೀಡಲು ಮತ್ತು ಮಧ್ಯ ಪ್ರವೇಶಿಸಲು ಅವಕಾಶ ಕೊಡಲಾಗಿದೆ. ಆದರೆ ಭಾರತೀಯ ಸಂಸದರು ಮತ್ತು ನಾಯಕರನ್ನು ವಿಮಾನ ನಿಲ್ದಾಣದಿಂದಲೇ ವಾಪಸ್ ಕಳುಹಿಸಲಾಗುತ್ತಿದೆ. ಇದು ಅತ್ಯಂತ ವಿಶಿಷ್ಟ ರಾಷ್ಟ್ರವಾದವಾಗಿದೆ ’ಎಂದು ಟ್ವೀಟಿಸಿದ್ದಾರೆ.
ಕಾಶ್ಮೀರ ಭೇಟಿಗೆ ದೇಶದ ರಾಜಕಾರಣಿಗಳು ಕಾನೂನು ನೆರವು ಪಡೆಯುವಂತಾಗಿತ್ತು,ಹೀಗಿರುವಾಗ ವಿದೇಶಿ ನಾಯಕರಿಗೆ ಅನುಮತಿಯನ್ನು ನೀಡಿರುವುದಕ್ಕಾಗಿ ಹಲವಾರು ಪ್ರತಿಪಕ್ಷ ನಾಯಕರು ಮೋದಿ ಸರಕಾರವನ್ನು ಟೀಕಿಸಿದ್ದಾರೆ.