ದಲಿತ ಯುವಕನ ಬಟ್ಟೆ ಬಿಚ್ಚಿ ಥಳಿಸಿದ ದುಷ್ಕರ್ಮಿಗಳು: ವಿಡಿಯೋ ವೈರಲ್
ಬಂದ್ ಎಚ್ಚರಿಕೆ ನೀಡಿದ ಜಿಗ್ನೇಶ್ ಮೇವಾನಿ
ಅಹ್ಮದಾಬಾದ್, ನ.4: ಗುಂಪೊಂದು ದಲಿತ ಯುವಕನೊಬ್ಬನನ್ನು ವಿವಸ್ತ್ರಗೊಳಿಸಿ ಥಳಿಸಿದ ಘಟನೆ ನಗರದ ಸಾಬರಮತಿ ಟೊಲ್ ನಾಕ ಪ್ರದೇಶದಲ್ಲಿ ನಡೆದಿದೆ. ಇನ್ನೊಬ್ಬ ಯುವಕನ ಮೇಲೆಯೂ ಗುಂಪು ಹಲ್ಲೆ ನಡೆಸಿದೆ.
ಘಟನೆಯ ವೀಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಉನಾ ಘಟನೆಯನ್ನು ನೆನಪಿಸುವಂತಿದೆ. ವೀಡಿಯೋದಲ್ಲಿ ಒಬ್ಬ ಯುವಕನ್ನು ವಿವಸ್ತ್ರಗೊಳಿಸಿ ಬೆತ್ತದಿಂದ ಹೊಡೆಯುತ್ತಿರುವುದು ಕಾಣಿಸುತ್ತದೆ. ಈ ಯುವಕನನ್ನು ಅಹ್ಮದಾಬಾದ್ ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ. ಹಲ್ಲೆಗೊಳಗಾದ ಇನ್ನೊಬ್ಬ ಯುವಕ ಗಾಯಗೊಂಡಿದ್ದನಾದರೂ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿಲ್ಲ.
ರೆಸ್ಟೋರೆಂಟ್ ಒಂದಕ್ಕೆ ದಲಿತ ಯುವಕರಾದ ಪ್ರಗ್ನೇಶ್ ಪರ್ಮಾರ್ ಹಾಗೂ ಜಯೇಶ್ ಸುಮಾರು 7:30ಕ್ಕೆ ಆಗಮಿಸಿದಾಗ ಘಟನೆ ನಡೆದಿತ್ತು. ರೆಸ್ಟೋರೆಂಟ್ ಮಾಲಕನ ಜತೆ ಅವರಿಗೆ ಜಗಳವಾದಾಗ ಆತ ಮತ್ತು ಇತರರು ಸೇರಿ ಇಬ್ಬರಿಗೂ ಥಳಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ/ಪಂಗಡ ದೌರ್ಜನ್ಯ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿದೆ. ರೆಸ್ಟೋರೆಂಟ್ ಮಾಲಕ ಮಹೇಶ್ ಎಂಬಾತನನ್ನು ಬಂಧಿಸಲಾಗಿದೆ. ಇತರ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಹೇಶ್ ಆ ಪ್ರದೇಶದಲ್ಲಿಯೇ ವಾಸಿಸುತ್ತಿದ್ದುದರಿಂದ ಆತನ ಕುಟುಂಬ ಸದಸ್ಯರು ಹಾಗೂ ಇತರ ಗುರುತು ಪರಿಚಯದವರು ಕೂಡ ಸೇರಿ ಯುವಕರಿಗೆ ಹಲ್ಲೆ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು 24 ಗಂಟೆಗಳೊಳಗಾಗಿ ಬಂಧಿಸದೇ ಇದ್ದರೆ ದಲಿತರು ಅಹ್ಮದಾಬಾದ್ ಬಂದ್ಗೆ ಕರೆ ನೀಡುತ್ತಾರೆ ಎಂದು ವಡಗಾಂವ್ ಶಾಸಕ ಜಿಗ್ನೇಶ್ ಮೇವಾನಿ ಎಚ್ಚರಿಸಿದ್ದಾರೆ.
TW: Abusive words and violence
— Jignesh Mevani (@jigneshmevani80) November 4, 2019
I will declare a Gujarat Bandh if the police does not arrest the perpetrators in 24 hours who attempted lynching of two Dalit youth in Ahmedabad yesterday night. Don't think Dalits are cowards: we believe in Constitution! pic.twitter.com/1Ge5Nw76Se