ಮಹಾರಾಷ್ಟ್ರದಲ್ಲಿ ಮರು ಚುನಾವಣೆಗೆ ಬಿಜೆಪಿ ನಾಯಕರ ಒಲವು: ಸಚಿವನ ಹೇಳಿಕೆ !
ಮುಂಬೈ, ನ. 4: ಮಹಾರಾಷ್ಟ್ರದ ನೂತನ ಸರಕಾರದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ತಲಾ ಎರಡೂವರೆ ವರ್ಷ ಹಂಚಿಕೊಳ್ಳುವ ತನ್ನ ಬೇಡಿಕೆಯನ್ನು ಶಿವಸೇನೆ ಬದಲಾಯಿಸಲು ಸಿದ್ಧವಿದ್ದಂತೆ ಕಾಣುತ್ತಿಲ್ಲ. ಈ ನಡುವೆ ಬಿಜೆಪಿ ಸಚಿವರೊಬ್ಬರು, ತಮ್ಮ ಪಕ್ಷದ ನಾಯಕರು ರಾಜ್ಯದಲ್ಲಿ ಮರು ಚುನಾವಣೆ ನಡೆಸುವ ಬಗ್ಗೆ ಒಲವು ಹೊಂದಿದ್ದಾರೆ ಎಂದಿದ್ದಾರೆ.
ಧುಲೆ ಜಿಲ್ಲೆಯಲ್ಲಿ ರವಿವಾರ ನಡೆದ ಪುನರ್ ಪರಿಶೀಲನಾ ಸಭೆಯ ಸಂದರ್ಭ ಬಿಜೆಪಿ ನಾಯಕರು ಈ ನಿಲುವು ವ್ಯಕ್ತಪಡಿಸಿದ್ದಾರೆ ಎಂದು ರಾಜ್ಯ ಪ್ರವಾಸ ಹಾಗೂ ಎಫ್ಡಿಎ ಸಚಿವ ಜಯಕುಮಾರ್ ರಾವಲ್ ತಿಳಿಸಿದ್ದಾರೆ.
‘‘ಬಿಜೆಪಿಯ ಹಿರಿಯ ನಾಯಕರು ಶಿವಸೇನೆಯೊಂದಿಗಿನ ಮೈತ್ರಿ ಮಾಡಿಕೊಳ್ಳಬಾರದಿತ್ತು. ನಮಗೆ ಅವಕಾಶ ನೀಡಿ, ನಾವು ಮತ್ತೆ ಸ್ಪರ್ಧಿಸಲಿದ್ದೇವೆ ಹಾಗೂ ಈ ಭಾರಿ ಕೂಡ ಜಯ ಗಳಿಸಲಿದ್ದೇವೆ ಎಂದು ಪಕ್ಷದ ನಾಯಕರು ಹೇಳಿರುವುದಾಗಿ” ರಾವಲ್ ತಿಳಿಸಿದ್ದಾರೆ. ಧುಲೆಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಹಲವು ನಾಯಕರು, ಕಾರ್ಯಕರ್ತರು ಹಾಗೂ ಇತ್ತೀಚೆಗೆ ವಿಧಾನ ಸಭೆ ಚುನಾವಣೆಯಲ್ಲಿ ಜಯ ಗಳಿಸಿದ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.