ಜಾರ್ಖಂಡ್ ನಲ್ಲಿ ಮತ್ತೋರ್ವ ಯುವಕನ ಥಳಿಸಿ ಹತ್ಯೆ
ರಾಂಚಿ, ಅ. 6: ಕಳ್ಳತನದ ಶಂಕೆಯಲ್ಲಿ ಗುಂಪೊಂದು ಹಲ್ಲೆ ನಡೆಸಿದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ಜಾರ್ಖಂಡ್ನ ಧನ್ಬಾದ್ನಲ್ಲಿ ಸಂಭವಿಸಿದೆ. ಮೃತಪಟ್ಟ ಯುವಕ ಮುಬಾರಕ್ ಅನ್ಸಾರಿ ಹಾಗೂ ಗಾಯಗೊಂಡ ಯುವಕ ಅಖ್ತರ್ ಅನ್ಸಾರಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಇಲ್ಲಿನ ಗೋವಿಂದಪುರ ಕಾಲನಿಯ ಸೇವಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಇಬ್ಬರು ಯುವಕರು ಟ್ರಕ್ನಿಂದ ಬ್ಯಾಟರಿ ಕಳವುಗೈಯಲು ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಟ್ರಕ್ ಚಾಲಕ ನೋಡಿ ಬೊಬ್ಬೆ ಹಾಕಿದ್ದಾನೆ. ಕೂಡಲೇ ಅಲ್ಲಿಗೆ ಆಗಮಿಸಿದ ಜನರು ಇಬ್ಬರಿಗೂ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಜನರಿಂದ ಥಳಿತಕ್ಕೊಳಗಾಗುತ್ತಿದ್ದ ಅಖ್ತರ್ ಅನ್ಸಾರಿಯನ್ನು ರಕ್ಷಿಸಿದ್ದಾರೆ. ಆದರೆ, ಮುಬಾರಕ್ ಅನ್ಸಾರಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.