ಅಯೋಧ್ಯೆ ತೀರ್ಪು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರ ವಿಶ್ವಾಸವನ್ನು ಗಟ್ಟಿಗೊಳಿಸಿದೆ: ಮೋದಿ
ಹೊಸದಿಲ್ಲಿ, ನ. 9: ಸುಪ್ರೀಮ್ ಕೋರ್ಟ್ ನೀಡಿರುವ ಅಯೋಧ್ಯೆ ತೀರ್ಪು ‘‘ನ್ಯಾಯಾಂಗ ಪ್ರಕ್ರಿಯೆಯಲ್ಲಿ ಜನರ ವಿಶ್ವಾಸವನ್ನು ಗಟ್ಟಿಗೊಳಿಸುತ್ತದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಹಾಗೂ ಶಾಂತಿ ಮತ್ತು ಏಕತೆಯನ್ನು ಕಾಯ್ದುಕೊಳ್ಳುವಂತೆ ಅವರು ಜನರಿಗೆ ಕರೆ ನೀಡಿದ್ದಾರೆ.
ಈ ತೀರ್ಪನ್ನು ಯಾರದೇ ವಿಜಯ ಅಥವಾ ಸೋಲು ಎಂಬುದಾಗಿ ನೋಡಬಾರದು ಎಂಬ ತನ್ನ ಹೇಳಿಕೆಯನ್ನು ಪ್ರಧಾನಿ ಪುನರುಚ್ಚರಿಸಿದರು.
‘‘ನ್ಯಾಯದ ದೇವಾಲಯವು ದಶಕಗಳ ಹಳೆಯ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿದೆ’’ ಎಂದು ಸರಣಿ ಟ್ವೀಟ್ಗಳಲ್ಲಿ ಅವರು ಹೇಳಿದ್ದಾರೆ.
‘‘ಅಯೋಧ್ಯೆ ಪ್ರಕರಣದಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ತೀರ್ಪನ್ನು ಯಾರದೇ ವಿಜಯ ಅಥವಾ ಸೋಲು ಎಂಬುದಾಗಿ ಪರಿಗಣಿಸಬಾರದು. ಅದು ರಾಮ ಭಕ್ತಿಯಾಗಿರಲಿ, ರಹೀಮ್ ಭಕ್ತಿಯಾಗಿರಲಿ, ರಾಷ್ಟ್ರ ಭಕ್ತಿಯ ಭಾವನೆಯನ್ನು ನಾವು ಬಲಪಡಿಸುವುದು ಅಗತ್ಯವಾಗಿದೆ. ಶಾಂತಿ ಮತ್ತು ಸೌಹಾರ್ದತೆ ಮೆರೆಯಲಿ’’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
Next Story