ಫಡ್ನವೀಸ್ ರನ್ನು ಅನರ್ಹಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ವಕೀಲ
ಮಹಾರಾಷ್ಟ್ರದ ಬಿಜೆಪಿ ನಾಯಕನಿಗೆ ಮತ್ತೊಂದು ಸಂಕಷ್ಟ
ಮುಂಬೈ, ನ. 12: ಭ್ರಷ್ಟಾಚಾರದ ಮಾರ್ಗದ ಮೂಲಕ ಮತ ಪಡೆದಿರುವುದರಿಂದ ದೇವೇಂದ್ರ ಫಡ್ನವೀಸ್ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ಮಹಾರಾಷ್ಟ್ರದ ನ್ಯಾಯವಾದಿಯೊಬ್ಬರು ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠವನ್ನು ಸಂಪರ್ಕಿಸಿದ್ದಾರೆ. 2019ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ 52 ನೈಋತ್ಯ ನಾಗಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದ ದೇವೇಂದ್ರ ಫಡ್ನವೀಸ್ ಅವರ ಪ್ರಮಾಣ ಪತ್ರವನ್ನು ಕೂಡಲೇ ಹಿಂದೆ ಪಡೆಯಲು ಹಾಗೂ ರದ್ದುಗೊಳಿಸಲು 52 ನೈಋತ್ಯ ನಾಗಪುರ ಕ್ಷೇತ್ರದ ಚುನಾವಣಾ ಅಧಿಕಾರಿಗೆ ನಿರ್ದೇಶಿಸುವಂತೆ ನ್ಯಾಯವಾದಿ ಸತೀಶ್ ಉಕೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.
2014-2019ರ ನಡುವೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಅಧಿಕಾರ ನಿರ್ವಹಿಸಿದ್ದ ಫಡ್ನವೀಸ್ ಈ ವರ್ಷ ನೈಋತ್ಯ ನಾಗಪುರ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. ಸುಪ್ರೀಂ ಕೋರ್ಟ್ನ ಅಕ್ಟೋಬರ್ 1ರ ನಿರ್ದೇಶನದಂತೆ ಮರು ದಾಖಲಿಸಲಾದ ಪ್ರಕರಣದ ವಿಚಾರಣೆ ಡಿಸೆಂಬರ್ 4ರಂದು ನಡೆಯಲಿದ್ದು, ಹಾಜರಿರುವಂತೆ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಫಸ್ಟ್ ಕ್ಲಾಸ್ ಕೋರ್ಟ್ ಫಡ್ನವೀಸ್ ಗೆ ನಿರ್ದೇಶಿಸಿದ ದಿನಗಳ ಈ ಬಳಿಕ ಈ ಬೆಳವಣಿಗೆ ನಡೆದಿದೆ.
ಉಕೆ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಹೊಸ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಕ್ಟೋಬರ್ 1ರಂದು ಆದೇಶಿಸಿದ ಬಳಿಕ ಫಡ್ನವೀಸ್ ವಿರುದ್ಧ ಪ್ರಕರಣ ಮರು ಆರಂಭಗೊಂಡಿದೆ. 2014ರ ಚುನಾವಣೆ ಸಂದರ್ಭದ ಅಫಿದಾವಿತ್ನಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳು ಇವೆ ಎಂದು ಫಡ್ನವೀಸ್ ಉಲ್ಲೇಖಿಸಿಲ್ಲ. ಆದುದರಿಂದ ಅವರ ಆಯ್ಕೆಯನ್ನು ಅನೂರ್ಜಿತಗೊಳಿಸಬೇಕು ಎಂದು ಉಕೆ ಆಗ್ರಹಿಸಿದ್ದಾರೆ.