ದಿಲ್ಲಿಯಲ್ಲಿ ‘ತುರ್ತು’ ಸ್ಥಿತಿಗೆ ತಲುಪಿದ ವಾಯು ಮಾಲಿನ್ಯ
ಹೊಸದಿಲ್ಲಿ, ನ. 13: ನೆರೆಯ ರಾಜ್ಯಗಳಲ್ಲಿ ಬೆಳೆ ತ್ಯಾಜ್ಯ ದಹನದಿಂದ ದಿಲ್ಲಿ ಹಾಗೂ ಅದರ ಉಪ ನಗರದಲ್ಲಿ ಹಾನಿಕಾರಕ ಹೊಗೆ ಹಬ್ಬಿದೆ. ಇದರಿಂದ ಉಷ್ಣಾಂಶ ಕುಸಿದಿದೆ ಹಾಗೂ ವಾಯು ಗುಣಮಟ್ಟ ‘ಗಂಭೀರ’ ಸ್ಥಿತಿಗೆ ತಲುಪಿತು. ದಿಲ್ಲಿ-ಎನ್ಸಿಆರ್ನಲ್ಲಿ ಮಾಲಿನ್ಯ ಮಟ್ಟ ಬುಧವಾರ ‘ಗಂಭೀರ ಪ್ಲಸ್’ ಅಥವಾ ‘ತುರ್ತು ಸ್ಥಿತಿ’ಗೆ ತಲುಪಿದೆ ಎಂದು ಸರಕಾರದ ವಾಯು ಗುಣಮಟ್ಟದ ನಿಗಾ ವಹಿಸುವ ಸಫರ್ ಹೇಳಿದೆ.
ದಿಲ್ಲಿಯಲ್ಲಿ ಬುಧವಾರ ಬೆಳಗ್ಗೆ ಉಷ್ಣಾಂಶ ಕನಿಷ್ಠ 11.7 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಿತು. ಇದು ಈ ಋತುಮಾನದ ಅತಿ ಕಡಿಮೆ ಉಷ್ಣಾಂಶ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಾಯು ವೇಗ ಹಾಗೂ ಉಷ್ಣಾಂಶದ ಕುಸಿತದ ಪರಿಣಾಮ ವಾಯು ಶೀತಲ ಹಾಗೂ ಸಾಂದ್ರಗೊಂಡಿತು. ಇದು ಮಾಲಿನ್ಯ ತೀವ್ರಗೊಳ್ಳಲು ಕಾರಣವಾಗಿವೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾತ್ಸವ ತಿಳಿಸಿದ್ದಾರೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಬ್ಯೂರೊ ಪ್ರಕಾರ, ದಿಲ್ಲಿಯ ಒಟ್ಟು ವಾಯು ಗುಣಮಟ್ಟ ಸೂಚ್ಯಾಂಕ ಮಂಗಳವಾರ ಸಂಜೆ 4 ಗಂಟೆಗೆ 425 ದಾಖಲಾಗಿದೆ. ಸೋಮವಾರ ಸಂಜೆ 4 ಗಂಟೆಗೆ 360 ದಾಖಲಾಗಿತ್ತು.