ವಾಯು ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಿ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶ
ಹೊಸದಿಲ್ಲಿ, ನ. 13: ದಿಲ್ಲಿಯಲ್ಲಿ ವಾಯು ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ಕೇಂದ್ರ ಸರಕಾರವನ್ನು ಬುಧವಾರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ವಾಯು ಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವಂತೆ ನಿರ್ದೇಶಿಸಿದೆ.
ದಿಲ್ಲಿಯಲ್ಲಿ ವಾಯು ಗುಣಮಟ್ಟ ಬುಧವಾರ ‘ಗಂಭೀರ’ ಸ್ಥಿತಿಗೆ ತಲುಪಿರುವುದರಿಂದ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿರುವ ಸುಪ್ರೀಂ ಕೋರ್ಟ್ನ ಪೀಠ, ಜಲಜನಕ ಆಧಾರಿತ ತೈಲ ತಂತ್ರಜ್ಞಾನದ ಕಾರ್ಯಸಾಧ್ಯತೆ ಅಂದಾಜಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
‘‘ವಾಯು ಮಾಲಿನ್ಯ ಸಮಸ್ಯೆ ಪರಿಹರಿಸಲು ಸರಕಾರ ಹಾಗೂ ಇತರ ಪಾಲುದಾರರು ಸ್ವಲ್ಪ ರಚನಾತ್ಮಕ ಶ್ರಮ ವಹಿಸಬೇಕು ಎಂಬುದು ನಮ್ಮ ನಿಲುವು’’ ಎಂದು ವಾಯು ಮಾಲಿನ್ಯದಿಂದ ತೊಂದರೆ ಅನುಭವಿಸುತ್ತಿರುವ ಉತ್ತರಭಾರತ ಹಾಗೂ ಎನ್ಸಿಆರ್ ಅನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ನ ಪೀಠ ಹೇಳಿತು. ಜಪಾನ್ನ ತಜ್ಞರು ಈ ಹಿಂದೆ ಸುಪ್ರೀಂ ಕೋರ್ಟ್ನ ಮುಂದೆ ಹಾಜರಾಗಿದ್ದರು ಹಾಗೂ ಭಾರತದ ವಾಯು ಮಾಲಿನ್ಯ ಸಮಸ್ಯೆ ಪರಿಹರಿಸಲು ಸಾಧ್ಯವಾಗುವ ಜಲಜನಕ ಆಧಾರಿತ ತೈಲ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದ್ದರು. ಜಪಾನ್ ತಜ್ಞರು ಸಲ್ಲಿಸಿದ ವರದಿ ಪರಿಶೀಲಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ತಿಳಿಸಿದೆ ಹಾಗೂ ಡಿಸೆಂಬರ್ 3ರ ಒಳಗೆ ಈ ಜಲಜನಕ ಆಧಾರಿತ ತಂತ್ರಜ್ಞಾನದ ಕಾರ್ಯಸಾಧ್ಯತೆ ಬಗ್ಗೆ ವರದಿ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿದೆ.