ಶಬರಿಮಲೆ: ಪುನರ್ಪರಿಶೀಲನೆ ಕೋರಿದ್ದ ಅರ್ಜಿಗಳನ್ನು ವಿಸ್ತ್ರತ ಪೀಠಕ್ಕೊಪ್ಪಿಸುವ ಸುಪ್ರೀಂ ನಿರ್ಧಾರಕ್ಕೆ ಸ್ವಾಗತ
ತಿರುವನಂತಪುರ,ನ.14: ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷ ವಯೋಮಾನದ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿದ್ದ ತನ್ನ 2018ರ ತೀರ್ಪನ್ನು ಪ್ರಶ್ನಿಸಿರುವ ಪುನರ್ಪರಿಶೀಲನೆ ಅರ್ಜಿಗಳನ್ನು ಏಳು ನ್ಯಾಯಾಧೀಶರ ವಿಸ್ತೃತ ಪೀಠಕ್ಕೊಪ್ಪಿಸುವ ಸರ್ವೋಚ್ಚ ನ್ಯಾಯಾಲಯದ ಗುರುವಾರದ ನಿರ್ಧಾರವನ್ನು ಕ್ಷೇತ್ರದ ಮುಖ್ಯತಂತ್ರಿ ಕಂದರಾರು ರಾಜೀವರು ಸೇರಿದಂತೆ ಹಲವರು ಸ್ವಾಗತಿಸಿದ್ದಾರೆ.
ದೇವರು ಕೋಟ್ಯಂತರ ಭಕ್ತರ ಪ್ರಾರ್ಥನೆಗಳನ್ನು ಆಲಿಸಿದ್ದಾನೆ ಎಂದು ಕಂದರಾರು ಹೇಳಿದರೆ,ಶಬರಿಮಲೆ ಕರ್ಮ ಸಮಿತಿ ಪೋಷಕ ಹಾಗೂ ಪಂದಳಂ ಅರಮನೆ ಸಮನ್ವಯ ಸಮಿತಿಯ ಅಧ್ಯಕ್ಷ ಶಶಿಕುಮಾರ ವರ್ಮಾ ಅವರು, ಸರ್ವೋಚ್ಚ ನ್ಯಾಯಾಲಯದ ನಿರ್ಧಾರವು ಭಕ್ತರಿಗೆ ನೆಮ್ಮದಿ ಮತ್ತು ಸಂತಸವನ್ನು ತಂದಿದೆ. ಈ ವಿಷಯದಲ್ಲಿ ನಮ್ಮ ಮಾನಸಿಕ ಸಂಕಟವು ತೀರ್ಪಿನಲ್ಲಿ ಅನುರಣಿಸಿದೆ. ನ್ಯಾಯಾಲಯವು ಅಯ್ಯಪ್ಪ ಭಕ್ತರ ಭಾವನೆಗಳನ್ನು ಅರ್ಥ ಮಾಡಿಕೊಂಡಿದೆ. ವಿಷಯವನ್ನು ವಿಸ್ತೃತ ಪೀಠಕ್ಕೊಪ್ಪಿಸಿರುವುದು ಸರ್ವೋಚ್ಚ ನ್ಯಾಯಾಲಯದ ಹಿಂದಿನ ತೀರ್ಪಿನಲ್ಲಿ ಕೆಲವು ದೋಷಗಳಿದ್ದವು ಎಂಬ ಶಂಕೆಯನ್ನು ಅಭಿವ್ಯಕ್ತಿಸಿದೆ ಎಂದರು.
ನ್ಯಾಯಾಲಯದ ನಿರ್ಧಾರವು ಭಕ್ತರ ಹಕ್ಕುಗಳನ್ನು ರಕ್ಷಿಸುವ ಮತ್ತು ಅವರ ಹಕ್ಕುಗಳನ್ನು ಎತ್ತಿ ಹಿಡಿಯುವ ದಿಶೆಯಲ್ಲಿದೆ ಎಂದು ಹೇಳಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅವರು,ಅದೆಂದೂ ಮೂಲಭೂತ ಹಕ್ಕುಗಳ ವಿಷಯವಾಗಿರಲಿಲ್ಲ. ಅದು ಸಮಾಜವು ಅನಾದಿಕಾಲದಿಂದಲೂ ಒಪ್ಪಿಕೊಂಡಿರುವ ಸಂಪ್ರದಾಯದ ವಿಷಯವಾಗಿತ್ತು ಎಂದರು.
ಅವಸರದಲ್ಲಿ ಕ್ರಮ ಕೈಗೊಳ್ಳದಂತೆ ಕೇರಳದ ಎಲ್ಡಿಎಫ್ ಸರಕಾರಕ್ಕೆ ಬಿಜೆಪಿ ಎಚ್ಚರಿಕೆಯನ್ನು ನೀಡಿದೆ. ಸರ್ವೋಚ್ಚ ನ್ಯಾಯಾಲಯವು ಇನ್ನೂ ಅಂತಿಮ ನಿರ್ಧಾರವನ್ನು ತೆಗೆದುಕೊಂಡಿಲ್ಲ, ಹೀಗಾಗಿ ಸರಕಾರವು ಸಂಯಮವನ್ನು ವಹಿಸಬೇಕು ಎಂದು ಕೇರಳ ಬಿಜೆಪಿಯ ಮಾಜಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದರು.
ಶಬರಿಮಲೆ ಯಾತ್ರೆ ಸುಗಮವಾಗಿ ನಡೆಯುವಂತಾಗಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಊಮ್ಮನ್ ಚಾಂಡಿ ಹೇಳಿದರೆ, ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಸರಕಾರವು ಬಲವಂತದಿಂದ ಮಹಿಳೆಯರ ದೇವಸ್ಥಾನ ಪ್ರವೇಶಕ್ಕೆ ಮುಂದಾದರೆ ಅದು ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಹಾಗು ಪ್ರತಿಪಕ್ಷ ನಾಯಕ ರಮೇಶ ಚೆನ್ನಿತಲ ಹೇಳಿದರು.
ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ಸ್ವಾಗತಿಸಿದ ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು,ಈ ವಿಷಯವು ಎಲ್ಲ ಧರ್ಮಗಳ ಆಚಾರಗಳ ಮೇಲೆ ಪರಿಣಾಮಗಳನ್ನು ಹೊಂದಿದೆ ಎಂದರು.