ಮುಂದಿನ 25 ವರ್ಷ ಶಿವಸೇನೆ ಸರಕಾರ: ಸಂಜಯ್ ರಾವತ್
ಮುಂಬೈ, ನ. 15: ಮಹಾರಾಷ್ಟ್ರದ ಮುಂದಿನ ಸರಕಾರದ ನೇತೃತ್ವವನ್ನು ಶಿವಸೇನೆ ವಹಿಸಲಿದೆ ಹಾಗೂ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕಾಂಗ್ರೆಸ್, ಎನ್ಸಿಪಿಯೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಶಿವಸೇನೆಯ ವಕ್ತಾರ ಸಂಜಯ್ ರಾವತ್ ಶುಕ್ರವಾರ ಹೇಳಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಕೇವಲ 5 ವರ್ಷ ಮಾತ್ರವಲ್ಲ, 25 ವರ್ಷ ಮಹಾರಾಷ್ಟ್ರ ಸರಕಾರದ ನೇತೃತ್ವ ವಹಿಸಲಿದೆ ಎಂದು ಸಂಜಯ್ ರಾವತ್ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭ ತಿಳಿಸಿದರು.
ನಿಮ್ಮ ಪಕ್ಷ ಕಾಂಗ್ರೆಸ್ ಹಾಗೂ ಎನ್ಸಿಪಿಯೊಂದಿಗೆ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಲಿದ್ದೀರಾ ? ಎಂಬ ಪ್ರಶ್ನೆಗೆ ಸಂಜಯ್ ರಾವತ್ ಈ ಪ್ರತಿಕ್ರಿಯೆ ನೀಡಿದರು. ರಾಜ್ಯದ ಹಾಗೂ ಜನತೆಯ ಹಿತಾಸಕ್ತಿ ಹಿನ್ನೆಲೆಯಲ್ಲಿ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಕುರಿತು ಕಾಂಗ್ರೆಸ್ ಹಾಗೂ ಎನ್ಸಿಪಿಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
Next Story