ಶೆಹ್ಲಾ ರಶೀದ್ ಬಂಧನಕ್ಕೆ ಮುನ್ನ 10 ದಿನಗಳ ನೋಟಿಸ್ ನೀಡಲು ಪೊಲೀಸರಿಗೆ ನ್ಯಾಯಾಲಯದ ನಿರ್ದೇಶ
ದೇಶದ್ರೋಹ ಪ್ರಕರಣ
ಹೊಸದಿಲ್ಲಿ, ನ.15: ಕಾಶ್ಮೀರ ಕುರಿತು ತನ್ನ ವಿವಾದಾತ್ಮಕ ಟ್ವೀಟ್ಗಳಿಂದ ದೇಶದ್ರೋಹ ಆರೋಪದಲ್ಲಿ ಪ್ರಕರಣ ದಾಖಲಿಸಿಲ್ಪಟ್ಟಿರುವ ಜಮ್ಮು-ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ನಾಯಕಿ ಶೆಹ್ಲಾ ರಶೀದ್ರ ಬಂಧನ ಅಗತ್ಯವಾದರೆ ಅವರಿಗೆ 10 ದಿನಗಳ ಪೂರ್ವಭಾವಿ ನೋಟಿಸ್ನ್ನು ನೀಡುವಂತೆ ಇಲ್ಲಿಯ ಹೆಚ್ಚುವರಿ ನ್ಯಾಯಾಲಯವು ಶುಕ್ರವಾರ ದಿಲ್ಲಿ ಪೊಲೀಸರಿಗೆ ಆದೇಶಿಸಿದೆ.
ತನಿಖೆಯು ಪ್ರಾಥಮಿಕ ಹಂತದಲ್ಲಿದೆ ಎಂದು ತನಿಖಾಧಿಕಾರಿ ತಿಳಿಸಿದ ಬಳಿಕ ರಶೀದ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಲೇವಾರಿಗೊಳಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಸತೀಶಕುಮಾರ ಅರೋರಾ ಅವರು ಈ ಆದೇಶವನ್ನು ಹೊರಡಿಸಿದರು.
ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕಿಯೂ ಆಗಿರುವ ರಶೀದ್ ಆ.17ರಂದು ಕಾಶ್ಮೀರ ಕುರಿತು ವಿವಾದಾತ್ಮಕ ಟ್ವೀಟ್ಗಳನ್ನು ಪೋಸ್ಟ್ ಮಾಡಿದ್ದರು. ಅವರ ವಿರುದ್ಧ ದಿಲ್ಲಿ ಪೊಲೀಸ್ನ ಸ್ಪೆಷಲ್ ಸೆಲ್ಗೆ ದೂರು ಸಲ್ಲಿಸಿದ್ದ ನ್ಯಾಯವಾದಿ ಅಲಖ್ ಅಲೋಕ ಶ್ರೀವಾಸ್ತವ ಅವರು,ಟ್ವೀಟ್ಗಳಲ್ಲಿ ಮಾಡಲಾಗಿರುವ ಆರೋಪಗಳು ಸುಳ್ಳು ಮತ್ತು ಕಪೋಲಕಲ್ಪಿತವಾಗಿವೆ ಎಂದು ಹೇಳಿದ್ದರು.
ರಶೀದ್ ದೇಶದಲ್ಲಿ ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ಸೇನೆಯ ಘನತೆಗೆ ಮಸಿ ಬಳಿಯುವ ಉದ್ದೇಶದಿಂದ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದೂ ಅವರು ಆರೋಪಿಸಿದ್ದರು.