ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುತ್ತಿಲ್ಲ: ಮುನ್ನೆಚ್ಚರಿಕೆ ಕ್ರಮವಾಗಿ ಹೇಳಿಕೆ ನೀಡಿದ ವಿಎಚ್ಪಿ
PTI
ಲಕ್ನೋ, ನ. 17: ಪ್ರಸ್ತಾಪಿತ ರಾಮ ಮಂದಿರ ನಿರ್ಮಾಣ ಮಾಡಲು ಯಾವುದೇ ನಿಧಿ ಸಂಗ್ರಹಿಸುತ್ತಿಲ್ಲ ಎಂದು ರಾಮಜನ್ಮ ಭೂಮಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವಿಶ್ವಹಿಂದೂ ಪರಿಷತ್ ರವಿವಾರ ಸ್ಪಷ್ಟನೆ ನೀಡಿದೆ.
ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ವಿಶ್ವಹಿಂದೂ ಪರಿಷತ್ ಅಥವಾ ರಾಮಜನ್ಮಭೂಮಿ ನ್ಯಾಸ್ ನಿಧಿ ಸಂಗ್ರಹಿಸಿಲ್ಲ ಅಥವಾ ನಿಧಿ ಸಂಗ್ರಹಿಸುವ ಯಾವುದೇ ಘೋಷಣೆ ಮಾಡಿಲ್ಲ ಎಂದು ವಿಶ್ವಹಿಂದೂ ಪರಿಷತ್ನ ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂದೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ವಿಶ್ವಹಿಂದೂ ಪರಿಷತ್ ಅಥವಾ ಶ್ರೀರಾಮಜನ್ಮ ಭೂಮಿ ನ್ಯಾಸ್ ಯಾವುದೇ ಮನವಿ ಮಾಡಿಲ್ಲ ಅಥವಾ ನಿಧಿ ಸಂಗ್ರಹಿಸಿಲ್ಲ ಎಂದು ಅವರು ಹೇಳಿದ್ದಾರೆ.
ಈ ಹೇಳಿಕೆ ನೀಡಲು ವಿಶ್ವಹಿಂದೂ ಪರಿಷತ್ ಅನ್ನು ಯಾರು ಪ್ರೇರೇಪಿಸಿದರು ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವಹಿಂದೂ ಪರಿಷತ್ನ ವಕ್ತಾರ ವಿನೋದ್ ಬನ್ಸಾಲ್, ರಾಮ ಮಂದಿರಕ್ಕಾಗಿ ವಿಶ್ವಹಿಂದೂ ಪರಿಷತ್ ಹೆಸರಲ್ಲಿ ಅಕ್ರಮವಾಗಿ ನಿಧಿ ಸಗ್ರಹಿಸುವ ಭೀತಿ ವಿಶ್ವ ಹಿಂದೂ ಪರಿಷತ್ಗೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಹೇಳಿಕೆ ನೀಡಿದೆವು. ವಿಶ್ವಹಿಂದೂ ಪರಿಷತ್ ಹೆಸರಲ್ಲಿ ರಾಮಮಂದಿರಕ್ಕೆ ಯಾವುದೇ ದೇಣಿಗೆ ನೀಡದಂತೆ ಜನರನ್ನು ಎಚ್ಚರಿಸುವ ಉದ್ದೇಶವನ್ನು ಈ ಹೇಳಿಕೆ ಹೊಂದಿದೆ ಎಂದರು.