ಶಿವಸೇನೆ ಜತೆ ಮೈತ್ರಿ ಕುರಿತಂತೆ ಮತ್ತೆ ಶರದ್ ಪವಾರ್ ಯು-ಟರ್ನ್ !
ಹೊಸದಿಲ್ಲಿ: ಮಹಾರಾಷ್ಟ್ರದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾಗುವುದೆಂದು ಕಳೆದ ವಾರವಷ್ಟೇ ಹೇಳಿದ್ದ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಸೋಮವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿಯಾಗುವ ಮುನ್ನವೇ ಯು-ಟರ್ನ್ ಹೊಡೆದಿದ್ದಾರೆ.
ಬಿಜೆಪಿ ಹಾಗೂ ಶಿವಸೇನೆ ಚುನಾವಣೆಯನ್ನು ಜತೆಯಾಗಿಯೇ ಎದುರಿಸಿದ್ದರಿಂದ ಅವುಗಳು ತಮ್ಮ ಹಾದಿಯನ್ನು ಆಯ್ದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
"ಬಿಜೆಪಿ-ಶಿವಸೇನೆ ಜತೆಯಾಗಿಯೇ ಚುನಾವಣೆ ಹೋರಾಡಿದ್ದವು. ನಾವು (ಎನ್ಸಿಪಿ) ಮತ್ತು ಕಾಂಗ್ರೆಸ್ ಜತೆಯಾಗಿಯೇ ಚುನಾವಣೆ ಎದುರಿಸಿದ್ದೆವು. ಅವರು ಅವರ ಹಾದಿಯನ್ನು ಆಯ್ದುಕೊಳ್ಳಬೇಕು, ನಾವು ನಮ್ಮ ರಾಜಕಾರಣ ಮಾಡುತ್ತೇವೆ'' ಎಂದರು.
ತಾವು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂದಿಯವರನ್ನು ಅವರ ನಿವಾಸದಲ್ಲಿ ಭೇಟಿಯಾಗುವುದಾಗಿಯೂ ಶರದ್ ಪವಾರ್ ತಿಳಿಸಿದರು. ಸದ್ಯ ರಾಷ್ಟ್ರಪತಿ ಆಡಳಿತ ಹೇರಲ್ಪಟ್ಟಿರುವ ಮಹಾರಾಷ್ಟ್ರದಲ್ಲಿ ತಮ್ಮ ಪಕ್ಷಗಳ ಮುಂದಿನ ನಡೆ ಹಾಗೂ ಶಿವಸೇನೆಯ ಜತೆ ಮೈತ್ರಿ ಸಾಧ್ಯತೆಯ ಕುರಿತು ಎರಡೂ ನಾಯಕರು ಈ ಭೇಟಿಯ ವೇಳೆ ಚರ್ಚಿಸಲಿದ್ದಾರೆ.