'ನಾನು ಜಿಲೇಬಿ ತಿನ್ನುವುದನ್ನೇ ಬಿಟ್ಟು ಬಿಡುತ್ತೇನೆ' ಎಂದ ಗೌತಮ್ ಗಂಭೀರ್ !
ಕಾರಣವೇನು ಗೊತ್ತಾ?
ಹೊಸದಿಲ್ಲಿ: ರಾಜಧಾನಿಯಲ್ಲಿ ಶುಕ್ರವಾರ ಮಾಲಿನ್ಯ ಸಮಸ್ಯೆ ಕುರಿತಂತೆ ಚರ್ಚಿಸಲು ಆಯೋಜಿಸಲಾಗಿದ್ದ ಸಭೆಗೆ ಗೈರಾಗಿ ಟ್ರೋಲಿಗೊಳಗಾಗಿದ್ದ ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತಮ್ಮನ್ನು ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಭೆಗೆ ಹಲವು ಸಂಸದರು ಆಗಮಿಸದೇ ಇದ್ದುದರಿಂದ ಕೊನೆಗೆ ಅದನ್ನು ರದ್ದುಪಡಿಸಬೇಕಾಗಿ ಬಂದಿತ್ತು.
ಸಭೆ ನಡೆಯುವ ದಿನದಂದು ಇಂದೋರ್ನಲ್ಲಿ ವೀಕ್ಷಕ ವಿವರಣೆ ನೀಡಲು ತೆರಳಿದ್ದ ಗಂಭೀರ್ ಅಲ್ಲಿ ಇತರರೊಂದಿಗೆ `ಜಿಲೇಬಿ' ಸವಿಯುತ್ತಿರುವ ಚಿತ್ರ ವೈರಲ್ ಆಗಿದ್ದು, ಇದನ್ನು ಎಎಪಿ ಕಾರ್ಯಕರ್ತರು ಅವರನ್ನು ನಿರಂತರ ಟ್ರೋಲ್ ಮಾಡಿದ್ದರಲ್ಲದೆ ಸಂಸದರು `ನಾಪತ್ತೆ'ಯಾಗಿದ್ದಾರೆಂಬ ಪೋಸ್ಟರ್ ಗಳೂ ರಾಜಧಾನಿಯ ಹಲವೆಡೆ ರಾರಾಜಿಸಿದ್ದವು.
ಇದಕ್ಕೆ ಪ್ರತಿಕ್ರಿಯಿಸಿರುವ ಗಂಭೀರ್ ``ನಾನು ಜಿಲೇಬಿ ತಿಂದಿದ್ದರಿಂದ ದಿಲ್ಲಿಯ ಮಾಲಿನ್ಯ ಮಟ್ಟ ಏರಿದೆಯೆಂದಾದರೆ ನಾನು ಜಿಲೇಬಿ ತಿನ್ನುವುದನ್ನೇ ಬಿಟ್ಟು ಬಿಡುತ್ತೇನೆ'' ಎಂದು ಹೇಳಿದ್ದಾರೆ.
``ಅವರು ಹತ್ತು ನಿಮಿಷಗಳಲ್ಲಿ ನನ್ನನ್ನು ಟ್ರೋಲ್ ಮಾಡಲು ಆರಂಭಿಸಿದ್ದರು. ಇಷ್ಟೇ ಶ್ರಮವನ್ನು ಮಾಲಿನ್ಯ ಕಡಿಮೆಗೊಳಿಸಲು ಅವರು ಹಾಕಿದ್ದರೆ ನಾವು ಉಸಿರಾಡುವ ಗಾಳಿ ಉತ್ತಮವಾಗಿರುತ್ತಿತ್ತು,'' ಎಂದು ಗಂಭೀರ್ ಹೇಳಿದ್ದಾರೆ.