ಶಾಸಕರನ್ನು ಖರೀದಿಸಿದರೆ ತಲೆ ಜಜ್ಜುತ್ತೇವೆ: ಶಿವಸೇನೆ ಶಾಸಕ
ANI
ಹೊಸದಿಲ್ಲಿ, ನ. 22: ಲಂಚ ಅಥವಾ ಬ್ಲಾಕ್ಮೇಲ್ ಮೂಲಕ ತನ್ನ ಶಾಸಕರನ್ನು ಸೆಳೆಯಲು ಯಾರಾದರೂ ಪ್ರಯತ್ನಿಸಿದರೆ, ಅವರ ತಲೆ ಜಜ್ಜಲಾಗುವುದು ಎಂದು ಶಿವಸೇನೆಯ ಶಾಸಕರೊಬ್ಬರು ಗುರುವಾರ ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್, ಶಿವಸೇನೆ ಹಾಗೂ ಎನ್ಸಿಪಿ ಮೈತ್ರಿ ಸರಕಾರದ ರಚನೆಗೆ ಮಾತುಕತೆ ಅಂತಿಮಗೊಳ್ಳುತ್ತಿರುವಂತೆ ಶಾಸಕ ಅಬ್ದುಲ್ ಸತ್ತಾರ್ ಅವರ ಈ ಹೇಳಿಕೆ ಹೊರಬಿದ್ದಿದೆ.
ಚುನಾಯಿತ ಜನಪ್ರತಿನಿಧಿಗಳನ್ನು ಸೆಳೆಯುವ ಅಥವಾ ಖರೀದಿಸುವ ವಿರುದ್ಧ ತನ್ನ ಮಾಜಿ ಮಿತ್ರ ಪಕ್ಷವಾದ ಬಿಜೆಪಿಗೆ ಔರಂಗಾಬಾದ್ ಜಿಲ್ಲೆಯ ಸಿಲ್ಲೋಡ್ ವಿಧಾನ ಸಭಾ ಕ್ಷೇತ್ರದ ಶಾಸಕ ಅಬ್ದುಲ್ ಸತ್ತಾರ್ ಎಚ್ಚರಿಕೆ ನೀಡಿದ್ದಾರೆ.
‘‘ಶಾಸಕರನ್ನು ಖರೀದಿಸಲು ನಮ್ಮ ಪಕ್ಷ ಚಿಲ್ಲರೆ ವ್ಯಾಪಾರದ ಅಂಗಡಿ ಅಲ್ಲ. ಯಾರಾದರೂ ನಮ್ಮ ಶಾಸಕರನ್ನು ಖರೀದಿಸಲು ಪ್ರಯತ್ನಿಸಿದರೆ, ಅವರ ತಲೆ ಒಡೆಯಲಾಗುವುದು ಹಾಗೂ ಕಾಲು ಮುರಿಯಲಾಗುವುದು. ಆದರೆ, ಶಿವಸೇನೆಯೇ ಆ್ಯಂಬುಲೆನ್ಸ್ಗೆ ಕರೆ ನೀಡಲಿದೆ ಹಾಗೂ ಅಂತವರ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಲಿದೆ’’ ಎಂದು ಅವರು ಹೇಳಿದರು.