ಬೆನ್ನಿಗೆ ಇರಿದ ಅಜಿತ್ ಪವಾರ್: ಶಿವಸೇನೆ
PTI
ಮುಂಬೈ, ನ.23: ಭ್ರಷ್ಟಾಚಾರ ಆರೋಪವನ್ನು ಎದುರಿಸುತ್ತಿರುವ ಅಜಿತ್ ಪವಾರ್ರನ್ನು ಬ್ಲಾಕ್ಮೇಲ್ ಮಾಡಲಾಗಿದೆ. ಈ ಕುರಿತ ವಿವರನ್ನು ಶೀಘ್ರ ಬಹಿರಂಗಗೊಳಿಸಲಾಗುವುದು ಎಂದು ಶಿವಸೇನೆ ಆರೋಪಿಸಿದೆ.
ಅಜಿತ್ ಪವಾರ್ ವಿಶ್ವಾಸದ್ರೋಹ ಎಸಗಿದ್ದು ಬೆನ್ನಿಗೆ ಇರಿದಿದ್ದಾರೆ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಜಿತ್ ಪವಾರ್ 10 ಶಾಸಕರನ್ನು ತನ್ನೊಂದಿಗೆ ಕರೆದೊಯ್ದು ರಾಜ್ಯಪಾಲರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಇವರಲ್ಲಿ ಐವರು ಶಾಸಕರು ಮರಳಿ ಬಂದು ಶರದ್ ಪವಾರ್ರನ್ನು ಭೇಟಿಯಾಗಿದ್ದಾರೆ. ಅಜಿತ್ ಪವಾರ್ ಕೂಡಾ ಮರಳಿ ಬರುತ್ತಾರೆ. ಬಿಜೆಪಿಯವರು ನಡುರಾತ್ರಿ ನಡೆಸಿದ ಅಪರಾಧವಿದು ಎಂದು ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆದಿರುವ ಅನಿರೀಕ್ಷಿತ ವಿದ್ಯಮಾನವನ್ನು ಬಿಜೆಪಿ ನಡೆಸಿರುವ ಪೊಲಿಟಿಕಲ್ ಸರ್ಜಿಕಲ್ ದಾಳಿ ಎಂದು ಶಿವಸೇನೆಯ ಮುಖಂಡ ಉದ್ಧವ್ ಠಾಕ್ರೆ ಬಣ್ಣಿಸಿದ್ದಾರೆ. ಬಿಜೆಪಿಯು ಶಿವಸೇನೆಯ ಕೆಲವು ಶಾಸಕರಿಗೆ ಆಮಿಷವೊಡ್ಡಿ ಸೆಳೆದುಕೊಳ್ಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಠಾಕ್ರೆ, ಅವರೊಮ್ಮೆ ಪ್ರಯತ್ನಿಸಿ ನೋಡಲಿ ಎಂದುತ್ತರಿಸಿದರು.