ಎನ್ಸಿಪಿ-ಶಿವಸೇನೆ-ಕಾಂಗ್ರೆಸ್ ಶಾಸಕರ ಬಲಾಬಲ 165: ಸಂಜಯ್ ರಾವತ್
ಮುಂಬೈ, ನ. 24: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ನ ಸಂಯೋಜನೆ 165 ಶಾಸಕರ ಬೆಂಬಲ ಹೊಂದಿದೆ ಎಂದು ಶಿವಸೇನೆಯ ನಾಯಕ ಸಂಜಯ್ ರಾವತ್ ರವಿವಾರ ಪ್ರತಿಪಾದಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್, ನಕಲಿ ದಾಖಲೆಗಳ ಆಧಾರದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿಗೆ ಸರಕಾರ ರಚಿಸಲು ಅವಕಾಶ ನೀಡಿದ್ದಾರೆ ಎಂದರು.
‘‘ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ನ ಸಂಯೋಜನೆಯಲ್ಲಿ 165 ಶಾಸಕರು ಇದ್ದಾರೆ. ಒಂದು ವೇಳೆ ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡಿದರೆ, ಕೇವಲ 10 ನಿಮಿಷದಲ್ಲಿ ನಾವು ಬಹುಮತ ಸಾಬೀತುಪಡಿಸಲಿದ್ದೇವೆ’’ ಎಂದು ರಾವತ್ ಹೇಳಿದರು. ನವೆಂಬರ್ 23 ಮಹಾರಾಷ್ಟ್ರದ ಚರಿತ್ರೆಯಲ್ಲಿ ‘ಕಪ್ಪು ಶುಕ್ರವಾರ’. ಆದುದರಿಂದ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿಯನ್ನು ‘ಕಪ್ಪು ದಿನ’ ಎಂದು ಕರೆಯಲು ಬಿಜೆಪಿಗೆ ಯಾವುದೇ ಹಕ್ಕು ಇಲ್ಲ ಎಂದು ಅವರು ಹೇಳಿದರು.
Next Story