ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿ ರಾಜೀನಾಮೆ ನೀಡಿದ ರಾಜ್ಯ ವಕ್ತಾರ
Photo: twitter.com/pprabhakar22
ರಾಂಚಿ, ಡಿ. 1: ಜಾರ್ಖಂಡ್ನಲ್ಲಿ ಬಿಜೆಪಿ ಆತ್ಮಶೋಧನೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ ಎಂದು ಬಿಜೆಪಿ ತೊರೆದಿರುವ ಪಕ್ಷದ ಪ್ರಾಥಮಿಕ ವಕ್ತಾರ ಪ್ರವೀಣ್ ಪ್ರಭಾಕರ್ ಹೇಳಿದ್ದಾರೆ.
ಬಿಜೆಪಿಗೆ ರವಿವಾರ ರಾಜೀನಾಮೆ ನೀಡಿದ ಬಳಿಕ ಪವೀಣ್ ಪ್ರಭಾಕರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ವಿಧಾನಸಭೆ ಚುನಾವಣೆಯಲ್ಲಿ ನಾಲಾದಿಂದ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ)ಯಿಂದ ಸ್ಪರ್ಧಿಸಲಿದ್ದಾರೆ.
ಕಳೆದ 5 ವರ್ಷಗಳಿಂದ ಬಿಜೆಪಿಯ ಜೊತೆಗಿದ್ದ ಪ್ರವೀಣ್ ಪ್ರಭಾಕರ್, ಅಖಿಲ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟ (ಎಜೆಎಸ್ಯು)ದ ಸ್ಥಾಪಕ ಸದಸ್ಯ. 2014ರ ವಿಧಾನ ಸಭೆ ಚುನಾವಣೆಯಲ್ಲಿ ಎಜೆಎಸ್ಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿತ್ತು. ಆದರೆ, ಈ ಬಾರಿ ಪ್ರವೀಣ್ ಪ್ರಭಾಕರ್ ಪ್ರತ್ಯೇಕವಾಗಿ ಎನ್ಪಿಪಿಯಿಂದ ಸ್ಪರ್ಧಿಸುತ್ತಿದ್ದಾರೆ.
ರಾಜ್ಯದಲ್ಲಿ ಪಕ್ಷದ ಟಿಕೆಟ್ ಹಂಚಿಕೆ ಬಗ್ಗೆ ಪ್ರವೀಣ್ ಪ್ರಭಾಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘‘ನಾನು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ವರಿಷ್ಠ, ಗೃಹ ಸಚಿವ ಅಮಿತ್ ಶಾ ಅವರಿಂದ ಸಾಕಷ್ಟು ಕಲಿತಿದ್ದೇನೆ. ಆದರೆ, ಜಾರ್ಖಂಡ್ನಲ್ಲಿ ಬಿಜೆಪಿ ಆತ್ಮಶೋಧನೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ’’ ಎಂದು ಪ್ರವೀಣ್ ಪ್ರಭಾಕರ್ ಹೇಳಿದ್ದಾರೆ.