ಎಂಎಸ್ಸಿ ಬ್ಯಾಂಕಿನೊಂದಿಗೆ ಪಿಎಂಸಿ ಬ್ಯಾಂಕಿನ ವಿಲೀನಕ್ಕೆ ಮಹಾರಾಷ್ಟ್ರ ಸರಕಾರದ ಸಲಹೆ
ಮುಂಬೈ,ಡಿ.5: ಸಂಕಷ್ಟದಲ್ಲಿರುವ ಹಗರಣ ಪೀಡಿತ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ (ಪಿಎಂಸಿ)ನ ಗ್ರಾಹಕರಿಗೆ ನೆಮ್ಮದಿಯನ್ನೊದಗಿಸಲು ಅದನ್ನು ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್ಸಿ)ನೊಂದಿಗೆ ವಿಲೀನಗೊಳಿಸುವಂತೆ ಮಹಾರಾಷ್ಟ್ರ ಸರಕಾರವು ಸಲಹೆ ನೀಡಿದೆ ಎಂದು ರಾಜ್ಯದ ಸಚಿವ ಜಯಂತ ಪಾಟೀಲ್ ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅಗತ್ಯವಾದರೆ ಈ ವಿಷಯದ ಬಗ್ಗೆ ರಾಜ್ಯ ಸರಕಾರವು ಆರ್ಬಿಐ ಜೊತೆ ಮಾತನಾಡಲಿದೆ ಎಂದರು.
“ಮಂಗಳವಾರ ನಾನು ಎಂಎಸ್ಸಿ ಬ್ಯಾಂಕಿನ ಅಧ್ಯಕ್ಷರೊಂದಿಗೆ ಮಾತನಾಡಿದ್ದೇನೆ. ಬಡ ಠೇವಣಿದಾರರಿಗೆ ನೆಮ್ಮದಿ ದೊರೆಯುವಂತಾಗಲು ಪಿಎಂಸಿ ಬ್ಯಾಂಕನ್ನು ವಿಲೀನಗೊಳಿಸಿಕೊಳ್ಳಲು ಪ್ರಯತ್ನಿಸುವಂತೆ ನಾವು ಎಂಎಸ್ಸಿ ಬ್ಯಾಂಕಿಗೆ ಸಲಹೆ ನೀಡಿದ್ದೇವೆ” ’ಎಂದ ಅವರು, “ಸರಕಾರವು ಪಿಎಂಸಿ ಬ್ಯಾಂಕಿನ ಠೇವಣಿದಾರರೊಂದಿಗಿದೆ ಎಂಬ ಭರವಸೆಯನ್ನು ನೀಡಲು ನಾವು ಬಯಸಿದ್ದೇವೆ. ಇವೆರಡೂ ಬ್ಯಾಂಕುಗಳ ವಿಲೀನ ಖಂಡಿತವಾಗಿಯೂ ಸಣ್ಣ ಠೇವಣಿದಾರರಿಗೆ ನೆರವಾಗಲಿದೆ. ಎಂಎಸ್ಸಿ ಬ್ಯಾಂಕಿನ ಹಣಕಾಸು ಸ್ಥಿತಿ ಸದೃಢವಾಗಿದೆ ಮತ್ತು ಪಿಎಂಸಿ ಬ್ಯಾಂಕನ್ನು ಅದರಲ್ಲಿ ವಿಲೀನಗೊಳಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದರು. ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲು ಸುಮಾರು ಒಂದೂವರೆ ತಿಂಗಳ ಕಾಲಾವಕಾಶ ಬೇಕಾಗುತ್ತದೆ” ಎಂದು ಪಾಟೀಲ್ ತಿಳಿಸಿದರು.