ತೆಲಂಗಾಣ ಪೊಲೀಸರು, ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ ಕೊಲೆಗೀಡಾದ ಪಶುವೈದ್ಯೆಯ ತಂದೆ
ಹೈದರಾಬಾದ್, ಡಿ.6: ನನ್ನ ಪುತ್ರಿ ಕೊಲೆಯಾಗಿ ಇಂದಿಗೆ 10 ದಿನಗಳು ಕಳೆದಿವೆ. ನನ್ನ ಮಗಳ ಆತ್ಮಕ್ಕೆ ಈಗ ಶಾಂತಿ ಸಿಕ್ಕಂತೆ ಆಗಿದೆ. ಆರೋಪಿಗಳನ್ನು ಎನ್ಕೌಂಟರ್ನಲ್ಲಿ ಸಾಯಿಸಿದ ಸೈಬರಾಬಾದ್ ಪೊಲೀಸರು ಹಾಗೂ ತೆಲಂಗಾಣ ಸರಕಾರಕ್ಕೆ ನಾನು ಕೃತಜ್ಞತೆ ಸಲ್ಲಿಸುವೆ ಎಂದು ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಕೊಲೆಯಾದ ಪಶು ವೈದ್ಯೆ ದಿಶಾ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ.
ಅತ್ಯಾಚಾರಿಗಳ ಎನ್ಕೌಂಟರ್ನಿಂದ ನಮಗೆ ಈಗ ಸಮಾಧಾನವಾಗಿದೆ. ಇಂತಹ ಅತ್ಯಾಚಾರಿಗಳಿಗೆ ಈ ಘಟನೆ ಒಂದು ಉದಾಹರಣೆಯಾಗಲಿ. ಇಷ್ಟು ದಿನ ನಮಗೆ ಬೆಂಬಲವಾಗಿದ್ದ, ಎಲ್ಲರಿಗೂ ಧನ್ಯವಾದಗಳು ಎಂದು ಮೃತ ಸಂತ್ರಸ್ತೆಯ ತಂಗಿ ಹೇಳಿದ್ದಾರೆ.
ಸೈಬರಾಬಾದ್ಪೊಲೀಸ್ ಆಯುಕ್ತ, ಕನ್ನಡಿಗ ವಿಶ್ವನಾಥ್ ಸಜ್ಜನರ್ ನೇತೃತ್ವದ ಪೊಲೀಸರ ತಂಡ ಇಂದು ಬೆಳಗ್ಗಿನ ಜಾವ ನಾಲ್ವರು ಅತ್ಯಾಚಾರ ಆರೋಪಿಗಳನ್ನು ಎನ್ಕೌಂಟರ್ನಲ್ಲಿ ಸಾಯಿಸಿದೆೆ. ಪೊಲೀಸರ ಈ ಕ್ರಮಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.
ಉತ್ತರಪ್ರದೇಶದ ಪೊಲೀಸರು ಹಾಗೂ ದಿಲ್ಲಿ ಪೊಲೀಸರಿಗೆ ತೆಲಂಗಾಣದ ಪೊಲೀಸರು ಸ್ಫೂರ್ತಿಯಾಗಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಮಾಯಾವತಿ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಪತಿ ಇಲ್ಲದೆ ನಾನು ಬದುಕುವುದಿಲ್ಲ. ವಿಚಾರಣೆ ಬಳಿಕ ವಾಪಸ್ ಕಳುಹಿಸುವುದಾಗಿ ಪೊಲೀಸರು ನನ್ನ ಪತಿಯನ್ನು ಕರೆದುಕೊಂಡು ಹೋಗಿದ್ದರು. ಇದೀಗ ಅವರಿಲ್ಲದೆ ನಾನು ಬದುಕುವುದು ಹೇಗೆ ಎಂದು ಎನ್ಕೌಂಟರ್ಗೀಡಾದ ಆರೋಪಿ ಚೆನ್ನಕೇಶವುಲು ಅವರ ಗರ್ಭಿಣಿ ಪತ್ನಿ ಅವಲತ್ತುಕೊಂಡಿದ್ದಾರೆ.