ಹೈದರಾಬಾದ್ ಎನ್ಕೌಂಟರ್ ಹಿಂದೆ ಕನ್ನಡಿಗ ಪೊಲೀಸ್ ಅಧಿಕಾರಿ ವಿಶ್ವನಾಥ್ ಸಜ್ಜನರ್
ಹೈದರಾಬಾದ್, ಡಿ.6: ತೆಲಂಗಾಣ ಪಶುವೈದ್ಯೆ ಅತ್ಯಾಚಾರ ಪ್ರಕರಣದ ಆರೋಪಿಗಳ ಎನ್ಕೌಂಟರ್ ಕಾರ್ಯಾಚರಣೆಯ ಹಿಂದಿರುವ ವ್ಯಕ್ತಿ ಕನ್ನಡಿಗರಾದ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್.
ಎನ್ಕೌಂಟರ್ ಸ್ಪೆಷಲಿಸ್ಟ್ ಪೊಲೀಸ್ ಅಧಿಕಾರಿ ಆಗಿರುವ ವಿಶ್ವನಾಥ್ಗೆ ಪಶುವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ತೆಲಂಗಾಣ ಸರಕಾರ ವಹಿಸಿಕೊಟ್ಟಿತ್ತು. ಕರ್ನಾಟಕದ ಹುಬ್ಬಳ್ಳಿಯವರಾದ ವಿಶ್ವನಾಥ್ ಈ ಹಿಂದೆ ತೆಲಂಗಾಣದ ವಾರಂಗಲ್ನಲ್ಲಿ ವಿವಾಹಿತ ಮಹಿಳೆಯ ಮೇಲೆ ಆಟೋ ಚಾಲಕ ಆ್ಯಸಿಡ್ ದಾಳಿ ನಡೆಸಿದ ಪ್ರಕರಣದ ಆರೋಪಿಯನ್ನು ಎನ್ಕೌಂಟರ್ ಮಾಡಿ ಸುದ್ದಿಯಾಗಿದ್ದರು.
ಅತ್ಯಾಚಾರ ಆರೋಪಿಗಳನ್ನು ಎನ್ಕೌಂಟರ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿರುವ ವಿಶ್ವನಾಥ್ ಹುಟ್ಟಿ ಬೆಳೆದಿದ್ದು ಹುಬ್ಬಳ್ಳಿಯಲ್ಲಿ. ಸದ್ಯ ಅವರ ಕುಟುಂಬ ಹುಬ್ಬಳ್ಳಿಯಲ್ಲಿ ನೆಲೆಸಿದೆ. ಜೆಜಿ ಶಾಲೆಯಲ್ಲಿ ಬಿ.ಕಾಂ ಪದವಿ, ಕರ್ನಾಟಕ ವಿವಿಯಿಂದ ಎಂಬಿಎ ಪದವಿ ಪಡೆದಿದ್ದಾರೆ. 1996ರ ಐಪಿಎಸ್ ಅಧಿಕಾರಿಯಾಗಿರುವ ಅವರು ಆಂಧ್ರ ಪೊಲೀಸ್ ಇಲಾಖೆಗೆ ನಿಯೋಜನೆಗೊಂಡಿದ್ದರು. 8 ಜಿಲ್ಲೆಗಳಲ್ಲಿ ಎಸ್ಪಿ ಆಗಿ ಕಾರ್ಯನಿರ್ವಹಿಸಿದ್ದಾರೆ.