ಎನ್ಕೌಂಟರ್ ನಮ್ಮ ವ್ಯವಸ್ಥೆಗೆ ಕಳಂಕ: ಕಾರ್ತಿ ಚಿದಂಬರಂ
ಹೊಸದಿಲ್ಲಿ, ಡಿ. 6: ಹೈದರಾಬಾದ್ನಲ್ಲಿ ಪಶು ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ನಡೆಸಿದ ಪ್ರಕರಣದ ಆರೋಪಿಗಳ ಎನ್ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ, ಎನ್ಕೌಂಟರ್ ನಮ್ಮ ವ್ಯವಸ್ಥೆಗೆ ಕಳಂಕ ಎಂದಿದ್ದಾರೆ.
‘‘ಅತ್ಯಾಚಾರ ಹೇಯ ಅಪರಾಧ. ಕಾನೂನಿನ ಅಡಿಯಲ್ಲಿ ಅದನ್ನು ಕಟ್ಟುನಿಟ್ಟಾಗಿ ನಿಗ್ರಹಿಸಬೇಕು. ಈ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಎನ್ಕೌಂಟರ್ ವ್ಯವಸ್ಥೆಗೆ ಕಳಂಕ. ತುರ್ತು ನ್ಯಾಯ ದೊರೆಯಬೇಕೆಂಬುದನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ ಇದು ಸರಿಯಾದ ದಾರಿ ಅಲ್ಲ’’ ಎಂದು ಅವರು ಹೇಳಿದ್ದಾರೆ.
ಓರ್ವ ಸಾಮಾನ್ಯ ನಾಗರಿಕನಾಗಿ ಹೇಳುವುದಾದರೆ, ನಾವೆಲ್ಲರೂ ಬಯಸಿದಂತೆ ಅಂತ್ಯವಾಗಿರುವುದರಿಂದ ನನಗೆ ಸಂತೋಷವಾಗಿದೆ. ಆದರೆ, ಈ ಅಂತ್ಯ ಕಾನೂನು ವ್ಯವಸ್ಥೆ ಮೂಲಕ ಆಗಬೇಕಿತ್ತು ಎಂದು ರಾಷ್ಟ್ರೀಯ ಮಹಿಳಾ ಹಕ್ಕುಗಳ ಆಯೋಗದ ರೇಖಾ ಶರ್ಮಾ ಹೇಳಿದ್ದಾರೆ. ನಾವು ಯಾವಾಗಲೂ ಅವರಿಗೆ ಮರಣದಂಡನೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದೆವು. ಇಲ್ಲಿ ಪೊಲೀಸರು ಉತ್ತಮ ನ್ಯಾಯಾಧೀಶರು. ಯಾವ ಸನ್ನಿವೇಶದಲ್ಲಿ ಇದು ಸಂಭವಿಸಿದೆ ಎಂದು ನನಗೆ ತಿಳಿದಿಲ್ಲ ಎಂದು ಶರ್ಮಾ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ಹಾಗೂ ಲೋಕಸಭಾ ಸದಸ್ಯೆ ಶಶಿ ತರೂರ್, ನ್ಯಾಯಾಂಗದ ಹೊರಗಿನ ಹತ್ಯೆ ಸ್ವೀಕಾರಾರ್ಹವಲ್ಲ ಎಂದು ಟ್ವೀಟ್ ಮಾಡಿದ್ದಾರೆ.