ಛಲ ಬಿಡದ ಈ ಅತ್ಯಾಚಾರ ಸಂತ್ರಸ್ತೆಯ ಕಥೆ ಓದಿ..
ರಾಯಪುರ, ಡಿ.10: ಇಪ್ಪತ್ತರ ಯುವತಿಯ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದರು. ಉಸಿರುಗಟ್ಟಿಸಿ ಸಾಯಿಸುವ ಪ್ರಯತ್ನ ಮಾಡಿದರು. ಆಕೆ ಇನ್ನೇನು ಸತ್ತಿದ್ದಾಳೆ ಎಂಬ ನಿರ್ಧಾರಕ್ಕೆ ಬಂದು ಆಕೆಯನ್ನು ಅಲ್ಲೇ ಬಿಟ್ಟು ಹೋದರು. ಆದರೆ ಛಲ ಬಿಡದ ಯುವತಿ ತೆವಳುತ್ತಾ ಸಂಬಂಧಿಕರ ಮನೆಗೆ ಬಂದಳು. ಈ ಆಘಾತದಿಂದ ಚೇತರಿಸಿಕೊಳ್ಳಲು ವಾರವೇ ಬೇಕಾಯಿತು. ಆದರೆ ಕೊನೆಗೂ ಸೋಮವಾರ ತನ್ನ ಈ ಸ್ಥಿತಿಗೆ ಕಾರಣವಾದ ಎಲ್ಲ ಆರೋಪಿಗಳು ಜೈಲುಪಾಲಾಗುವಂತೆ ಮಾಡುವಲ್ಲಿ ಯುವತಿ ಯಶಸ್ವಿಯಾಗಿದ್ದಾಳೆ.
ಈ ಘಟನೆ ನಡೆದದ್ದು ಛತ್ತೀಸ್ಗಢದ ರಾಜನಂದಗಾವ್ ಎಂಬ ಗ್ರಾಮದಲ್ಲಿ. ಆರೋಪಿಗಳೆಲ್ಲರೂ 19-20 ವರ್ಷ ವಯಸ್ಸಿನವರು. ಯುವತಿ ತನ್ನ ಮಾವನ ಮನೆಗೆ ಕುಟುಂಬದ ಸಮಾರಂಭಕ್ಕಾಗಿ ಹೋಗಿದ್ದಳು. ಡಿಸೆಂಬರ್ 2ರಂದು ರಾತ್ರಿ ಕಸ ಎಸೆಯಲು ಹೊರಗೆ ಬಂದಿದ್ದಳು. ಆದರೆ ಸಮಯ ಸಾಧಿಸಿ ಕಾಯುತ್ತಿದ್ದ ನಾಲ್ವರು ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದರು. ಸಮಾರಂಭಕ್ಕೆ ಹಾಕಿದ್ದ ಧ್ವನಿವರ್ಧಕದ ಅಬ್ಬರಕ್ಕೆ, ಯುವತಿಯ ಆರ್ತನಾದ ಯಾರಿಗೂ ಕೇಳಿಸಲಿಲ್ಲ.
ಆಕೆಯ ಬಾಯಿಗೆ ಬಟ್ಟೆ ತುರುಕಿ ನಾಲ್ವರು ಅತ್ಯಾಚಾರ ಎಸಗಿದರು. ಬಳಿಕ ಉಸಿರುಗಟ್ಟಿಸಿ ಸಾಯಿಸುವ ಯತ್ನ ನಡೆಯಿತು. ಪ್ರಜ್ಞೆ ತಪ್ಪಿ ಬಿದ್ದ ಆಕೆ ಸತ್ತಿರಬೇಕು ಎಂಬ ನಿರ್ಧಾರಕ್ಕೆ ಬಂದ ನಾಲ್ವರು ಆರೋಪಿಗಳು ಜಾಗ ಖಾಲಿ ಮಾಡಿದರು. ಪ್ರಜ್ಞೆ ಮರುಕಳಿಸಿದ ಬಳಿಕ ತೆವಳಿಕೊಂಡೇ ಮಾವನ ಮನೆಗೆ ಬಂದಳು. ಆದರೆ ಘಟನೆ ಬಗ್ಗೆ ಏನೂ ಹೇಳಲಿಲ್ಲ.
ಕೊನೆಗೆ ರವಿವಾರ ತನ್ನ ಪೋಷಕರಿಗೆ ಘಟನೆಯನ್ನು ವಿವರಿಸಿ, ಆರೋಪಿಗಳನ್ನು ನ್ಯಾಯದ ಕಟಕಟೆಗೆ ಎಳೆಯಲೇಬೇಕು ಎಂಬ ನಿರ್ಧಾರಕ್ಕೆ ಬಂದಳು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.