ಜಾರ್ಖಂಡ್: ಇಬ್ಬರು ಅಧಿಕಾರಿಗಳನ್ನು ಗುಂಡಿಟ್ಟು ಕೊಂದ ಸಿಆರ್ಪಿಎಫ್ ಯೋಧ
ರಾಂಚಿ, ಡಿ.10: ಬೊಕಾರೊ ಪಟ್ಟಣದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಯಾಗಿದ್ದ್ದ ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್ಪಿಎಫ್)ಯೋಧನೊಬ್ಬ ತನ್ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಗುಂಡಿಟ್ಟು ಹತ್ಯೆಗೈದಿದ್ದು, ಇನ್ನೊಬ್ಬ ಗಾಯಗೊಂಡಿದ್ದಾನೆ. ಚುನಾವಣೆ ನಡೆಯುತ್ತಿರುವ ರಾಜ್ಯದಲ್ಲಿ 24 ಗಂಟೆಯೊಳಗೆ ನಡೆದಿರುವ ಎರಡನೇ ಅಹಿತಕರ ಘಟನೆ ಇದಾಗಿದೆ.
ಸಿಆರ್ಪಿಎಫ್ನ 226ನೇ ಬೆಟಾಲಿಯನ್ನ ಕಾನ್ಸ್ಟೇಬಲ್ ಕುಡಿತ ಮತ್ತಿನಲ್ಲಿ ಸಹಾಯಕ ಕಮಾಂಡರ್ ಹಾಗೂ ಸಹಾಯಕ ಸಬ್-ಇನ್ಸ್ಪೆಕ್ಟರ್ರನ್ನು ಸೋಮವಾರ ಬೆಳಗ್ಗೆ 9:30ರ ಸುಮಾರಿಗೆ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆಗೆ ಕಾರಣ ಏನೆಂದು ಇನ್ನೂ ಸ್ಪಷ್ಟವಾಗಿಲ್ಲ. ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಗೆ ಸಂಬಂಧಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಇನ್ನೋರ್ವ ಅಧಿಕಾರಿ ತಿಳಿಸಿದ್ದಾರೆ.
ರಾಂಚಿಯಲ್ಲಿ ಸೋಮವಾರ ಇದೇ ರೀತಿಯ ಘಟನೆಯೊಂದು ವರದಿಯಾಗಿತ್ತು. ಛತ್ತೀಸ್ಗಡ ಸಶಸ್ತ್ರ ಪಡೆಯ ಕಾನ್ಸ್ಟೆಬಲ್ ತನ್ನ ಕಂಪೆನಿಯ ಕಮಾಂಡರ್ನನ್ನು ಸಾಯಿಸಿ, ಬಳಿಕ ತಾನೂ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.