ತನ್ನ ಪ್ರಜೆಗಳಿಗೆ ಈಶಾನ್ಯ ಭಾರತಕ್ಕೆ ಪ್ರಯಾಣಿಸುವ ಮೊದಲು ‘ಎಚ್ಚರಿಕೆ’ ಎಂದ ಅಮೆರಿಕ, ಇಂಗ್ಲೆಂಡ್
ಹೊಸದಿಲ್ಲಿ, ಡಿ.14: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹಿಂಸಾತ್ಮಕ ಪ್ರತಿಭಟನೆಯು ಈಶಾನ್ಯ ಭಾರತದಲ್ಲಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ, ಇಂಗ್ಲೆಂಡ್ ಹಾಗೂ ಕೆನಡಾ ದೇಶಗಳು ತಮ್ಮ ಪ್ರಜೆಗಳಿಗೆ ಪ್ರಯಾಣದ ಕುರಿತು ಸಲಹೆಯನ್ನು ನೀಡಿದ್ದು, ಯಾವುದೇ ಉದ್ದೇಶಕ್ಕಾಗಿ ಈ ಭಾಗಕ್ಕೆ ಪ್ರಯಾಣಿಸುವಾಗ ಸಂಪೂರ್ಣ ಎಚ್ಚರಿಕೆಯಿಂದಿರುವಂತೆ ತಿಳಿಸಿವೆೆ.
‘‘ಭಾರತ ದೇಶದ ಕೆಲವು ಭಾಗಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ. ಈಶಾನ್ಯ ಭಾರತ ಅದರಲ್ಲೂ ಮುಖ್ಯವಾಗಿ ಅಸ್ಸಾಂ ಹಾಗೂ ತ್ರಿಪುರಾದಲ್ಲಿ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಗುವಾಹಟಿಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಲಾಗಿದ್ದು, ಅಸ್ಸಾಂನ 10 ಜಿಲ್ಲೆಗಳಲ್ಲಿ ಮೊಬೈಲ್ ಅಂತರ್ಜಾಲ ಸೇವೆಗಳನ್ನು ಸ್ಥಗಿತ ಗೊಳಿಸಲಾಗಿದೆ. ಈ ಪ್ರದೇಶಗಳಲ್ಲಿ ಪ್ರಯಾಣಿಸಬೇಕಾದ ಅಗತ್ಯ ಎದುರಾದರೆ, ಇತ್ತೀಚಿನ ಮಾಹಿತಿಗಾಗಿ ಸ್ಥಳೀಯ ಮಾಧ್ಯಮವನ್ನು ಗಮನಿಸಬೇಕು. ಸ್ಥಳೀಯ ಪ್ರಾಧಿಕಾರಿಗಳು ನೀಡಿದ ಸಲಹೆಗಳನ್ನು ಪಾಲಿಸಬೇಕು. ಪ್ರಯಾಣಕ್ಕಾಗಿ ಹೆಚ್ಚಿನ ಸಮಯವನ್ನು ಮೀಸಲಿಡಬೇಕು ಎಂದು ತನ್ನ ಪ್ರಜೆಗಳಿಗೆ ಇಂಗ್ಲೆಂಡ್ ಸಲಹೆ ನೀಡಿದೆ.
ಅಮೆರಿಕ ಕೂಡ ತನ್ನ ಪ್ರಜೆಗಳಿಗೆ ಇದೇ ರೀತಿಯ ಸಲಹೆ ನೀಡಿದೆ. ಅಸ್ಸಾಂಗೆ ಅಧಿಕೃತ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಅಮೆರಿಕ ಹೆಚ್ಚುವರಿಯಾಗಿ ತನ್ನ ಪ್ರಯಾಣಿಕರ ಸಲಹಾ ಪಟ್ಟಿಯಲ್ಲಿ ನಮೂದಿಸಿದೆ.