ಸಾಲದಲ್ಲಿ ಮುಳುಗಿದ್ದ ಕರ್ನಾಟಕದ ರೈತನನ್ನು ಕೋಟ್ಯಾಧಿಪತಿಯಾಗಿಸಿದ ಈರುಳ್ಳಿ
ಬೆಂಗಳೂರು: ಈರುಳ್ಳಿ ಬೆಲೆಯೇರಿಕೆ ಗ್ರಾಹಕರ ಕಣ್ಣುಗಳಲ್ಲಿ ನೀರು ತರಿಸಿದ್ದರೂ ಚಿತ್ರದುರ್ಗ ಜಿಲ್ಲೆಯ ದೊಡ್ಡಸಿದ್ದವ್ವನಹಳ್ಳಿಯ ರೈತ ಮಲ್ಲಿಕಾರ್ಜುನ ಈರುಳ್ಳಿ ಬೆಳೆದು ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾಗಿದ್ದಾರೆ.
ಸಾಲ ಮಾಡಿ ಈರುಳ್ಳಿ ಬೆಳೆ ನೆಟ್ಟಿದ್ದ ಮಲ್ಲಿಕಾರ್ಜುನ ತಾವು ತಮ್ಮ ಜೀವನದ ಅತಿ ದೊಡ್ಡ ರಿಸ್ಕ್ ಇದೇ ಮೊದಲ ಬಾರಿ ತೆಗೆದುಕೊಂಡಿದ್ದಾಗಿ ಹೇಳುತ್ತಾರೆ. "ಬೆಳೆ ನಷ್ಟವಾಗಿ ಬೆಲೆಗಳು ಕುಸಿದಿದ್ದರೆ ನಾನು ವಿಪರೀತ ಸಾಲದಲ್ಲಿ ಮುಳುಗಿ ಬಿಡುತ್ತಿದ್ದೆ. ಆದರೆ ಇದೀಗ ಈರುಳ್ಳಿ ನನ್ನ ಹಾಗೂ ನನ್ನ ಕುಟುಂಬದ ಅದೃಷ್ಟವನ್ನೇ ಖುಲಾಯಿಸಿದೆ'' ಎಂದು ಸಂತಸದಿಂದ ಅವರು ಹೇಳುತ್ತಾರೆ.
ಈರುಳ್ಳಿ ಬೆಲೆ ಕೆಜಿಗೆ 200 ರೂ. ಗಡಿ ತಲುಪುತ್ತಿದ್ದಂತಹ ಸಂದರ್ಭ ಮಲ್ಲಿಕಾರ್ಜುನ ಅವರು 240 ಟನ್ ಈರುಳ್ಳಿ ಮಾರಾಟ ಮಾಡಿದ್ದರು. ರೂ. 5ರಿಂದ ರೂ. 10 ಲಕ್ಷ ಲಾಭಗಳಿಸುವ ನಿರೀಕ್ಷೆಯಿಂದ ರೂ. 15 ಲಕ್ಷ ಹೂಡಿಕೆ ಮಾಡಿದ್ದ ಅವರ ಪಾಲಿಗೆ ಅದೃಷ್ಟ ಒಲಿದಿತ್ತು. ಇದೀಗ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸೆಲೆಬ್ರಿಟಿ ಆಗಿರುವ ಮಲ್ಲಿಕಾರ್ಜುನ ತಮ್ಮ ಸಾಲ ತೀರಿಸಿದ್ದು, ಮನೆ ಕಟ್ಟುವ ಯೋಚನೆ ಹಾಗೂ ಇನ್ನೂ ಹೆಚ್ಚು ಜಮೀನು ಖರೀದಿಸುವ ಇರಾದೆ ಹೊಂದಿದ್ದಾರೆ.