ಬಿಎಚ್ಯು: ಅತೀಂದ್ರಿಯ ವಿಜ್ಞಾನದಲ್ಲಿ ಸರ್ಟಿಫಿಕೇಟ್ ಕೋರ್ಸ್
ವಾರಣಾಸಿ, ಡಿ. 26: ಬನಾರಾಸ್ ಹಿಂದೂ ವಿಶ್ವವಿದ್ಯಾನಿಲಯ ಭೂತ (ದೆವ್ವ) ವಿದ್ಯೆ ಅಥವಾ ಅತೀಂದ್ರಿಯ ವಿಜ್ಞಾನದಲ್ಲಿ 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ. ಮೊದಲ ತಂಡದ ತರಗತಿ ಜನರಿಯಿಂದ ಆರಂಭವಾಗಲಿದೆ.
ಕೋರ್ಸ್ನ ಸಂದರ್ಭ ಮಾನಸಿಕ ಅಸ್ವಸ್ಥತೆ, ಅಜ್ಞಾತ ಕಾರಣಗಳಿಂದಾಗುವ ಅಸಹಜ ಮಾನಸಿಕ ಸ್ಥಿತಿಗೆ ಚಿಕಿತ್ಸೆ ನೀಡುವ ಬಗ್ಗೆ ವೈದ್ಯರು ಬೋಧಿಸಲಿದ್ದಾರೆ. ಈ ಕೋರ್ಸ್ ಅನ್ನು ಆಯುರ್ವೇದ ವಿಭಾಗದ ಸಿಬ್ಬಂದಿ ಆಯೋಜಿಸಲಿದ್ದಾರೆ. ಬಿಎಎಂಎಸ್ ಹಾಗೂ ಎಂಬಿಬಿಎಸ್ ಪದವಿಧರರು ಈ ಕೋರ್ಸ್ಗೆ ಅರ್ಜಿ ಸಲ್ಲಿಸಬಹುದು. ವಿಶ್ವ ವಿದ್ಯಾನಿಲಯದಲ್ಲಿ ಭೂತ (ದೆವ್ವ) ವಿದ್ಯೆಗೆ ಪ್ರತ್ಯೇಕ ಘಟಕವನ್ನು ದೇಶದಲ್ಲಿ ಆರಂಭಿಸುತ್ತಿರುವುದು ಇದೇ ಮೊದಲು. ಅಸ್ತಂಗ ಆಯುರ್ವೇದದ 8 ಮೂಲ ಶಾಖೆಗಳಲ್ಲಿ ಭೂತ (ದೆವ್ವ) ವಿದ್ಯೆ ಕೂಡ ಒಂದು ಎಂದು ಆಯುರ್ವೇದ ವಿಭಾಗದ ಡೀನ್ ಯಾಮಿನಿ ಭೂಷಣ್ ತ್ರಿಪಾಠಿ ಹೇಳಿದ್ದಾರೆ.
ಭೂತ (ದೆವ್ವ) ಸಂಬಂಧಿ ಅಸ್ವಸ್ಥತೆ ಹಾಗೂ ಮಾನಸಿಕ ಅಸ್ವಸ್ಥತೆಗೆ ಆಯುರ್ವೇದ ಚಿಕಿತ್ಸೆ ನೀಡುವುದನ್ನು ಇದು ನಿರ್ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ. ಆಯುರ್ವೇದ ಹಾಗೂ ಔಷಧ ಸಂಶೋಧನೆಯ ಅಂತಾರಾಷ್ಟ್ರೀಯ ಜರ್ನಲ್ ಪ್ರಕಾರ ಸುಶ್ರೂತ ಭೂತ (ದೆವ್ವ) ವಿದ್ಯೆಯನ್ನು ಆಯುರ್ವೇದದ ಒಂದು ಶಾಖೆಯಾಗಿ ಪರಿಗಣಿಸುತ್ತಾರೆ. ದೇವ, ದೈತ್ಯ, ಗಾಂಧರ್ವ, ಯಕ್ಷ, ರಾಕ್ಷಸ, ಪಿತಾರ್, ಪಿಶಾಶ, ನಾಗ ಮೊದಲಾದುವುಗಳಿಂದ ಉಂಟಾಗುವ ರೋಗವನ್ನು ಶಾಂತಿಪಥ, ಬಲಿಪ್ರಧಾನ, ಹವನ ಮೊದಲಾದವುಗಳ ಮೂಲಕ ಚಿಕಿತ್ಸೆ ನೀಡಿ ಗುಣಪಡಿಸುವುದನ್ನು ಈ ಭೂತ (ದೆವ್ವ) ವಿದ್ಯೆ ಬೋಧಿಸುತ್ತದೆ ಎಂದು ಅದು ತಿಳಿಸಿದೆ.