ಮೋದಿ ಮತ್ತು ಶಾ ದೇಶವನ್ನು ಪ್ರಕ್ಷುಬ್ಧತೆ ಮತ್ತು ಅಶಾಂತಿಗೆ ತಳ್ಳಿದ್ದಾರೆ:ಅಶೋಕ್ ಗೆಹ್ಲೋಟ್
ಸಿಎಎ ವಿರುದ್ಧ ಪ್ರತಿಭಟನೆಗಳು
ಹೊಸದಿಲ್ಲಿ,ಡಿ.27: ವಿವೇಚನಾರಹಿತ ಸಿಎಎ,ಎನ್ಆರ್ಸಿ ಮತ್ತು ಎನ್ಪಿಆರ್ಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರು ದೇಶವನ್ನು ಪ್ರಕ್ಷುಬ್ಧತೆ ಮತ್ತು ಅಶಾಂತಿಗೆ ತಳ್ಳಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಆರೋಪಿಸಿದ್ದಾರೆ.
‘ಸರಕಾರವು ಪ್ರತಿಯೊಂದು ರಂಗದಲ್ಲಿಯೂ ವಿಫಲಗೊಂಡಿದೆ. ನಿಜವಾದ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ತಿರುಗಿಸಲು ಅವರೀಗ ಇಂತಹ ವಿಷಯಗಳನ್ನೆತ್ತುತ್ತಿದ್ದಾರೆ ಮತ್ತು ಅಶಾಂತಿಯನ್ನು ಪ್ರಚೋದಿಸುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಡಿಸುತ್ತಿದ್ದಾರೆ ’ಎಂದು ಟ್ವೀಟಿಸಿರುವ ಗೆಹ್ಲೋಟ್,ಸಿಎಎ ಅನ್ನು ಹಿಂದೆಗೆದುಕೊಳ್ಳುವಂತೆ ಮತ್ತು ಎನ್ಆರ್ಸಿಯನ್ನು ಜಾರಿಗೊಳಿಸುವುದಿಲ್ಲ ಎಂದು ದೇಶಕ್ಕೆ ಭರವಸೆ ನೀಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ.
ಮೋದಿ ಮತ್ತು ಶಾ ವಿಭಿನ್ನ ಧ್ವನಿಗಳಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು,ದೇಶವನ್ನು ದಾರಿ ತಪ್ಪಿಸಲು ಪ್ರಧಾನಿಗಳು ಒಂದನ್ನು ಹೇಳುತ್ತಿದ್ದರೆ ಗೃಹಸಚಿವರು ಇನ್ನೊಂದನ್ನು ಹೇಳುತ್ತಿದ್ದಾರೆ. ಇದು ಜನರಲ್ಲಿ ಭೀತಿಯನ್ನು ಹೆಚ್ಚಿಸುತ್ತದೆಯಷ್ಟೇ. ಮೋದಿ ಮತ್ತು ಶಾ ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತ ಅನಿರ್ದಿಷ್ಟತೆಯನ್ನು ಹೆಚ್ಚಿಸುತ್ತಿದ್ದಾರೆ ಎಂದಿದ್ದಾರೆ. ಸತ್ಯವೇನು ಎನ್ನುವುದನ್ನು ಮೋದಿಯವರು ಹೇಳಬೇಕು ಎಂದು ಒತ್ತಾಯಿಸಿದ್ದಾರೆ.