'ಟುಕ್ಡೆ ಟುಕ್ಡೆ' ಗ್ಯಾಂಗ್ ನಲ್ಲಿ ಬಿಜೆಪಿಯ ದುರ್ಯೋಧನ, ದುಷ್ಯಾಸನರು: ಯಶವಂತ್ ಸಿನ್ಹಾ
ಹೊಸದಿಲ್ಲಿ: "ಭಾರತದಲ್ಲಿ ಅತ್ಯಂತ ಅಪಾಯಕಾರಿ ಟುಕ್ಡೆ ಟುಕ್ಡೆ ಗ್ಯಾಂಗ್ ನಲ್ಲಿ ಕೇವಲ ಇಬ್ಬರು ಮಾತ್ರ ಇದ್ದಾರೆ. ದುರ್ಯೋಧನ ಹಾಗೂ ದುಷ್ಯಾಸನ, ಇಬ್ಬರೂ ಬಿಜೆಪಿಯಲ್ಲಿದ್ದಾರೆ" ಎಂದು ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಹೇಳಿದ್ದಾರೆ.
ರಾಜಧಾನಿಯಲ್ಲಿ ನಡೆದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಬಿಜೆಪಿ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್ ಶಾ "ಕಾಂಗ್ರೆಸ್ ನೇತೃತ್ವದ ಟುಕ್ಡೆ-ಟುಕ್ಡೆ ಗ್ಯಾಂಗ್ ದೇಶದಲ್ಲಿ ಹಿಂಸೆಗೆ ಕಾರಣವಾಗಿದೆ. ಈ ಗ್ಯಾಂಗ್ ಗೆ ಶಿಕ್ಷ ನೀಡುವ ಸಮಯ ಬಂದಿದೆ'' ಎಂದಿದ್ದರು. ಇದೀಗ ಗೃಹಸಚಿವರ ಈ ಹೇಳಿಕೆಗೆ ಸಿನ್ಹಾ ತಿರುಗೇಟು ನೀಡಿದ್ದಾರೆ.
"ಭಾರತದಲ್ಲಿ ಅತ್ಯಂತ ಅಪಾಯಕಾರಿ ಟುಕ್ಡೆ ಟುಕ್ಡೆ ಗ್ಯಾಂಗ್ನಲ್ಲಿ ಕೇವಲ ಇಬ್ಬರು ಜನರಿದ್ದಾರೆ-ದುರ್ಯೋಧನ ಹಾಗೂ ದುಷ್ಯಾಸನ, ಇಬ್ಬರೂ ಬಿಜೆಪಿಯಲ್ಲಿದ್ದಾರೆ, ಅವರ ಬಗ್ಗೆ ಎಚ್ಚರಿಕೆಯಿಂದಿರಿ'' ಎಂದು ಸಿನ್ಹಾ ಹೇಳಿದ್ದಾರೆ.
ಬಿಜೆಪಿ ತೊರೆದಿರುವ ಸಿನ್ಹಾ ನರೇಂದ್ರ ಮೋದಿ ಸರಕಾರದ ಕಟು ಟೀಕಾಕಾರರಾಗಿದ್ದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಈ ಹಿಂದೆ ಹಲವಾರು ಬಾರಿ ಹೇಳಿದ್ದರು.