ಬಿಎಸ್ಎನ್ಎಲ್-ಎಂಟಿಎನ್ಎಲ್ ಪುನರುಜ್ಜೀವನ: ಸಚಿವ ಸಮಿತಿ ರಚನೆ
ಹೊಸದಿಲ್ಲಿ,ಡಿ.28: 69,000 ಕೋ.ರೂ.ವೆಚ್ಚದಲ್ಲಿ ಸರಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಪುನರುಜ್ಜೀವನ ಯೋಜನೆಯ ತ್ವರಿತ ಅನುಷ್ಠಾನ ಮತ್ತು ಉಸ್ತುವಾರಿಗಾಗಿ ಏಳು ಸಚಿವರ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ.
4ಜಿ ಸ್ಪೆಕ್ಟ್ರಂ ಹಂಚಿಕೆ ಮತ್ತು ಆಸ್ತಿ ನಗದೀಕರಣದಂತಹ ಪ್ರಮುಖ ವಿಷಯಗಳು ಸೇರಿದಂತೆ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಸಂಸ್ಥೆಗಳ ಪುನಃಶ್ಚೇತನ ಕುರಿತು ಕೈಗೊಳ್ಳಲಾದ ಇತ್ತೀಚಿನ ನಿರ್ಧಾರಗಳ ಸುಗಮ ಅನುಷ್ಠಾನವನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಸಮಿತಿಯು ಕಾರ್ಯ ನಿರ್ವಹಿಸಲಿದೆ.
ರಕ್ಷಣಾ ಸಚಿವ ರಾಜನಾಥ ಸಿಂಗ್, ಐಟಿ ಮತ್ತು ದೂರಸಂಪರ್ಕ ಸಚಿವ ರವಿಶಂಕರf ಪ್ರಸಾದf, ಗೃಹಸಚಿವ ಅಮಿತ್ ಶಾ,ವಿತ್ತಸಚಿವೆ ನಿರ್ಮಲಾ ಸೀತಾರಾಮನ್,ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮತ್ತು ತೈಲ ಸಚಿವ ಧರ್ಮೇಂದ್ರ ಪ್ರಧಾನ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಎಂಟಿಎನ್ಎಲ್ ದಿಲ್ಲಿ ಮತ್ತು ಮುಂಬೈ ಮಹಾನಗರಗಳಲ್ಲಿ ಹಾಗೂ ಬಿಎಸ್ಎನ್ಎಲ್ ದೇಶದ ಉಳಿದ ಭಾಗಗಳಲ್ಲಿ ದೂರಸಂಪರ್ಕ ಸೇವೆಗಳನ್ನು ಒದಗಿಸುತ್ತಿವೆ. ಇವೆರಡೂ ಸಂಸ್ಥೆಗಳು ಸುಮಾರು ಹತ್ತು ವರ್ಷಗಳಿಂದ ನಿರಂತರವಾಗಿ ನಷ್ಟದಲ್ಲಿವೆ.