ಆದಿತ್ಯನಾಥ್ ಸರಕಾರದಿಂದ ಸದಫ್ ವಿರುದ್ಧ ಆಧಾರ ರಹಿತ ಆರೋಪಗಳು: ಪ್ರಿಯಾಂಕಾ ಗಾಂಧಿ
ಲಕ್ನೋ, ಡಿ.29: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ಪ್ರತಿಭಟನೆ ಸಂದರ್ಭ ಪಕ್ಷದ ಕಾರ್ಯಕರ್ತೆ ಸದಫ್ ಜಾಫರ್ ಅವರ ಬಂಧನಕ್ಕಾಗಿ ಉತ್ತರ ಪ್ರದೇಶ ಸರಕಾರದ ವಿರುದ್ಧ ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು,ಸಾಮಾಜಿಕ ಕಾರ್ಯಕರ್ತೆ ಜಾಫರ್ ವಿರುದ್ಧ ಆಧಾರವಿಲ್ಲದ ಆರೋಪಗಳನ್ನು ಹೊರಿಸುವ ಮೂಲಕ ಅದು ಅಮಾನವೀಯತೆಯ ಎಲ್ಲ ಮಿತಿಗಳನ್ನು ದಾಟಿದೆ ಎಂದು ಹೇಳಿದ್ದಾರೆ.
ಡಿ.19ರಂದು ಇಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದ ಸಂದರ್ಭ ಫೇಸ್ಬುಕ್ನಲ್ಲಿ ಲೈವ್ ನೀಡಿದ್ದ ಜಾಫರ್ ಅವರನ್ನು ಪೊಲೀಸರು ಘರ್ಷಣೆಗಳಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಬಂಧಿಸಿದ್ದರು.
‘ಉ.ಪ್ರದೇಶ ಸರಕಾರವು ಅಮಾನವೀಯತೆಯ ಎಲ್ಲ ಮಿತಿಗಳನ್ನು ದಾಟಿದೆ. ಜಾಫರ್ ಅವರು ಹಿಂಸಾಚಾರದಲ್ಲಿ ತೊಡಗಿರುವವರನ್ನು ಬಂಧಿಸುವಂತೆ ಪೊಲೀಸರಿಗೆ ಹೇಳುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿದೆ. ಪೊಲೀಸರು ಅವರ ವಿರುದ್ಧ ಆಧಾರರಹಿತ ಆರೋಪಗಳನ್ನು ಹೊರಿಸಿ ಜೈಲಿಗೆ ತಳ್ಳಿದ್ದಾರೆ ’ಎಂದು ಪ್ರಿಯಾಂಕಾ ರವಿವಾರ ಟ್ವೀಟಿಸಿದ್ದಾರೆ.
ಜಾಫರ್ ಮಕ್ಕಳು ತಾಯಿಯ ಬಿಡುಗಡೆಗಾಗಿ ಕಾತುರತೆಯಿಂದ ಕಾಯುತ್ತಿದ್ದಾರೆ. ಈ ಸಂವೇದನಾಶೂನ್ಯ ಸರಕಾರವು ಮಕ್ಕಳನ್ನು ತಮ್ಮ ತಾಯಿಯಿಂದ ಮತ್ತು ಹಿರಿಯರನ್ನು ತಮ್ಮ ಮಕ್ಕಳಿಂದ ಬೇರ್ಪಡಿಸಿದೆ ಎಂದೂ ಅವರು ಹೇಳಿದ್ದಾರೆ.