ಮಹಾರಾಷ್ಟ್ರ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ ನಲ್ಲಿ 'ಅಸಮಾಧಾನ' ಆರಂಭ: ವರದಿ
ಮುಂಬೈ: ಸೋಮವಾರ ನಡೆದ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ ಹಿರಿಯ ಕಾಂಗ್ರೆಸ್ ನಾಯಕ ಪೃಥ್ವಿರಾಜ್ ಚವಾಣ್ ಸಹಿತ ಪಕ್ಷದ ಹಲವು ನಾಯಕರಿಗೆ ಅಸಮಾಧಾನವುಂಟು ಮಾಡಿದೆ ಎಂದು ಎನ್ ಡಿಟಿವಿ ವರದಿ ಮಾಡಿದೆ.
ಚವಾಣ್ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಸಚಿವ ಸ್ಥಾನಾಕಾಂಕ್ಷಿಗಳಾಗಿದ್ದರೂ ಅವರನ್ನು ಪರಿಗಣಿಸದೇ ಇರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಸೋಮವಾರ ಎನ್ ಸಿಪಿಯ ಅಜಿತ್ ಪವಾರ್ ಸಹಿತ ಎನ್ ಸಿಪಿ, ಕಾಂಗ್ರೆಸ್ ಹಾಗೂ ಶಿವಸೇನೆಯ ಒಟ್ಟು 34 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ತಮ್ಮನ್ನು ನಿರ್ಲಕ್ಷ್ಯಿಸಲಾಗಿದೆ ಎಂದು ದೂರಿ ಚವಾಣ್ ಸಹಿತ ನಸೀಮ್ ಖಾನ್, ಪ್ರಣೀತಿ ಶಿಂಧೆ, ಸಂಗ್ರಾಮ್ ತೊಪ್ಟೆ, ಅಮೀನ್ ಪಾಟೀಲ್ ಹಾಗೂ ರೋಹಿದಾಸ್ ಪಾಟೀಲ್ ಸೋಮವಾರ ಸಂಜೆಯೇ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ತಮ್ಮ ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ತರುವಾಯ ಸೋಮವಾರ ಸಂಪುಟಕ್ಕೆ ಸೇರ್ಪಡೆಗೊಂಡ ಅಶೋಕ್ ಚವಾಣ್, ದಿಲೀಪ್ ವಾಲ್ಸೆ ಪಾಟೀಲ್, ಧನಂಜಯ್ ಮುಂಡೆ, ಸುನಿಲ್ ಛತ್ರಪಾಲ್ ಹಆಗೂ ಕೆ ಸಿ ಪಡ್ವಿ ಇಂದು ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಹುಲ್ ನಿವಾಸದಲ್ಲಿ ಭೇಟಿಯಾಗಿದ್ದಾರೆ.