ಸ್ಟಾಲಿನ್ ರ ಸಿಆರ್ಪಿಎಫ್ ಭದ್ರತೆ ಹಿಂಪಡೆದ ಕೇಂದ್ರ ಸರಕಾರ
ವಿವಿ ವಿದ್ಯಾರ್ಥಿಗಳಿಗೆ ಭದ್ರತೆ ಒದಗಿಸಿ ಎಂದ ಡಿಎಂಕೆ ಮುಖ್ಯಸ್ಥ
ಚೆನ್ನೈ, ಜ.10: ತನಗೆ ನೀಡಲಾಗಿರುವ ‘ಝೆಡ್ ಪ್ಲಸ್’ ಭದ್ರತೆಯನ್ನು ಕೇಂದ್ರ ಸರಕಾರ ಹಿಂಪಡೆದಿರುವ ಹಿನ್ನೆಲೆಯಲ್ಲಿ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್, ಕೇಂದ್ರೀಯ ಮೀಸಲು ಪೊಲೀಸ್ ಪಡೆಗೆ(ಸಿಆರ್ಪಿಎಫ್)ಕೃತಜ್ಞತೆ ಸಲ್ಲಿಸಿದರಲ್ಲದೆ, ವಿಶ್ವ ವಿದ್ಯಾಲಯಗಳ ವಿದ್ಯಾರ್ಥಿಗಳ ಸುರಕ್ಷತೆಗೆ ಸಿಆರ್ಪಿಎಫ್ನ್ನು ಬಳಸಬೇಕೆಂದು ಆಗ್ರಹಿಸಿದರು.
‘‘ಕಳೆದ ಕೆಲವು ವರ್ಷಗಳಿಂದ ನನಗೆ ಭದ್ರತೆ ನೀಡಿರುವ ಪ್ರತಿಯೊಬ್ಬ ಸಿಆರ್ಪಿಎಫ್ ಯೋಧರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುವೆ. ಧರ್ಮದ ಹೆಸರಲ್ಲಿ ಹಿಂಸಾಚಾರಕ್ಕೆ ಬಲಿಪಶುವಾಗುತ್ತಿರುವ ವಿಶ್ವವಿದ್ಯಾಲಯಗಳು ಹಾಗೂ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡಲು ಸಿಆರ್ಪಿಎಫ್ನ್ನು ಸರಕಾರ ಬಳಸಬೇಕು’’ ಎಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.
ಸ್ಟಾಲಿನ್ಗೆ ನೀಡಲಾಗಿದ್ದ ‘ಝೆಡ್ ಪ್ಲಸ್’ ಭದ್ರತೆಯನ್ನು ಹಿಂಪಡೆದಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಡಿಎಂಕೆ ತೀವ್ರವಾಗಿ ಖಂಡಿಸಿದೆ.
Next Story