ಭಾರತದಲ್ಲಿ ಪ್ರತಿ ವರ್ಷ ಐದು ಲಕ್ಷ ಅಪಘಾತಗಳಲ್ಲಿ 1.5 ಲಕ್ಷ ಜನರ ಸಾವು: ಗಡ್ಕರಿ
ಈ ಅಂಕಿ ಸಂಖ್ಯೆಯನ್ನು ತಗ್ಗಿಸಲು ತನ್ನ ಸಚಿವಾಲಯಕ್ಕೆ ಸಾಧ್ಯವಾಗಿಲ್ಲ ಎಂದ ಕೇಂದ್ರ ಸಚಿವ
ಫೈಲ್ ಚಿತ್ರ
ನಾಗ್ಪುರ (ಮಹಾರಾಷ್ಟ್ರ),ಜ.11: ದೇಶದಲ್ಲಿ ಪ್ರತಿವರ್ಷ ಐದು ಲಕ್ಷ ಅಪಘಾತಗಳು ಸಂಭವಿಸುತ್ತಿದ್ದು,ಸುಮಾರು ಒಂದೂವರೆ ಲಕ್ಷ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಶನಿವಾರ ಇಲ್ಲಿ ಹೇಳಿದ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು,ಹಲವಾರು ಕ್ರಮಗಳನ್ನು ತೆಗೆದುಕೊಂಡರೂ ಈ ಅಂಕಿಸಂಖ್ಯೆಯನ್ನು ತಗ್ಗಿಸಲು ತನ್ನ ಸಚಿವಾಲಯಕ್ಕೆ ಸಾಧ್ಯವಾಗಿಲ್ಲ ಎಂದು ವಿಷಾದವನ್ನು ವ್ಯಕ್ತಪಡಿಸಿದರು.
ಇಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ಪ್ರತಿವರ್ಷ ಐದು ಲಕ್ಷ ಅಪಘಾತಗಳಲ್ಲಿ ಸುಮಾರು 1.5 ಲ.ಜನರು ಮೃತಪಡುವ ಜೊತೆಗೆ 2.5-3 ಲ.ಜನರು ಗಾಯಗೊಳ್ಳುತ್ತಿದ್ದಾರೆ. ಇದರಿಂದ ದೇಶಕ್ಕೆ ಶೇ.2ರಷ್ಟು ಜಿಡಿಪಿ ನಷ್ಟವಾಗುತ್ತಿದೆ. ಅಲ್ಲದೆ ರಸ್ತೆ ಅಪಘಾತಗಳಲ್ಲಿ ಮೃತರ ಪೈಕಿ ಶೇ.62ರಷ್ಟು 18ರಿಂದ 35 ವರ್ಷ ವಯೋಮಾನದವರಾಗಿದ್ದಾರೆ ಎಂದರು. ರಸ್ತೆ ಅಪಘಾತಗಳ ಸಂಖ್ಯೆಯನ್ನು ಶೇ.29ರಷ್ಟು ಮತ್ತು ಸಾವುನೋವುಗಳನ್ನು ಶೇ.30ರಷ್ಟು ತಗ್ಗಿಸಿರುವುದಕ್ಕಾಗಿ ತಮಿಳುನಾಡು ಸರಕಾರವನ್ನು ಗಡ್ಕರಿ ಪ್ರಶಂಸಿಸಿದರು.
ರಸ್ತೆ ಸುರಕ್ಷತಾ ಸಪ್ತಾಹವು ಶನಿವಾರ ದೇಶಾದ್ಯಂತ ಆರಂಭಗೊಂಡಿದ್ದು,ಜ.17ರಂದು ಅಂತ್ಯಗೊಳ್ಳಲಿದೆ.