ಬಿಹಾರದಲ್ಲಿ ಎನ್ ಆರ್ ಸಿ ಜಾರಿಯ ಪ್ರಶ್ನೆಯೇ ಇಲ್ಲ: ನಿತೀಶ್ ಕುಮಾರ್
ಪಾಟ್ನ, ಜ.13: ಪೌರತ್ವ ಕಾಯ್ದೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ತಾನು ಮುಕ್ತನಾಗಿದ್ದೇನೆ. ಅಲ್ಲದೆ ರಾಜ್ಯದಲ್ಲಿ ಎನ್ಆರ್ಸಿ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ನಿತೀಶ್ ಕುಮಾರ್ ಪೌರತ್ವ ಕಾಯ್ದೆಯ ಪುನರ್ವಿಮರ್ಶೆಗಾಗಿ ಬಹಿರಂಗವಾಗಿ ಕರೆ ನೀಡಿದ ಬಿಜೆಪಿಯ ಪ್ರಪ್ರಥಮ ಮಿತ್ರನಾಗಿದ್ದಾರೆ. ರಾಜ್ಯದಲ್ಲಿ ಎನ್ಆರ್ಸಿ ಜಾರಿಯಾಗದು ಎಂದು ಈ ಹಿಂದೆ ಹೇಳಿಕೆ ನೀಡಿದ್ದರೂ ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಹೇಳಿಕೆ ನೀಡುವ ಮೂಲಕ ತಮ್ಮ ಹೇಳಿಕೆಯನ್ನು ಅಧಿಕೃತಗೊಳಿಸಿದ್ದಾರೆ. ಮೀಸಲಾತಿ ಪ್ರಮಾಣವನ್ನು ಅಂಗೀಕರಿಸುವ ಉದ್ದೇಶದಿಂದ ಕರೆಯಲಾಗಿದ್ದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಆರ್ಜೆಡಿ ಮತ್ತು ಎಡಪಕ್ಷಗಳು ಧರ್ಮ ಆಧಾರಿತ ಪೌರತ್ವ ಕಾಯ್ದೆಯ ವಿಷಯದಲ್ಲಿ ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದಾಗ ಮಧ್ಯಪ್ರವೇಶಿಸಿದ ನಿತೀಶ್ ಕುಮಾರ್ ಈ ಹೇಳಿಕೆ ನೀಡಿದ್ದಾರೆ.
ಜನ ಬಯಸುವುದಾದರೆ ಸದನದಲ್ಲಿ ಪೌರತ್ವ ಕಾಯ್ದೆಯ ಬಗ್ಗೆ ಚರ್ಚೆ ನಡೆಯಲಿ. ಆದರೆ ಎನ್ಆರ್ಸಿ ಜಾರಿಯ ಪ್ರಶ್ನೆಯೇ ಇಲ್ಲ ಮತ್ತು ಅದರ ಅಗತ್ಯವೂ ಇಲ್ಲ ಎಂದು ನಿತೀಶ್ ಸ್ಪಷ್ಟಪಡಿಸಿದರು. ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಸಂಸತ್ತಿನಲ್ಲಿ ಪೌರತ್ವ ಕಾಯ್ದೆಯನ್ನು ಬೆಂಬಲಿಸಿತ್ತು. ಆದರೆ ಜೆಡಿಯು ನಡೆಗೆ ತೀವ್ರ ಅಸಮಾಧಾನ ಸೂಚಿಸಿದ್ದ ಜೆಡಿಯು ಉಪಾಧ್ಯಕ್ಷ ಪ್ರಶಾಂತ್ ಕಿಶೋರ್, ಪೌರತ್ವ ಕಾಯ್ದೆ ಹಾಗೂ ಎನ್ಆರ್ಸಿ ವಿಷಯದಲ್ಲಿ ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದರು.
ಬಿಹಾರದಲ್ಲಿ ಎನ್ಆರ್ಸಿ ಮತ್ತು ಪೌರತ್ವ ಕಾಯ್ದೆ ಜಾರಿಯಾಗುವುದಿಲ್ಲ ಎಂದು ಎಲ್ಲರಿಗೂ ಮತ್ತೊಮ್ಮೆ ಖಚಿತಪಡಿಸಲು ಬಯಸುತ್ತೇನೆ ಎಂದು ರವಿವಾರ ಟ್ವೀಟ್ ಮಾಡಿದ್ದರು. ಎನ್ಆರ್ಸಿ ಪ್ರಕ್ರಿಯೆಯ ಪೀಠಿಕೆ ಎಂದೇ ಪರಿಗಣಿಸಲ್ಪಟ್ಟಿರುವ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಪಿಆರ್)ಗೆ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸಿದ್ದು ಬಿಹಾರದಲ್ಲೂ ಈ ಬಗ್ಗೆ ಅಧಿಸೂಚನೆ ಹೊರಡಿಸಿರುವುದನ್ನು ವಿರೋಧ ಪಕ್ಷಗಳು ಟೀಕಿಸಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ನಿತೀಶ್ ಕುಮಾರ್, ಪರಿಷ್ಕೃತ ಅಧಿಸೂಚನೆಯ ಕುರಿತ ವಿವರವನ್ನು ಅಧ್ಯಯನ ನಡೆಸಿ ಜನವರಿ 19ರ ಬಳಿಕ ಎಲ್ಲವನ್ನೂ ಸ್ಪಷ್ಟಪಡಿಸುವುದಾಗಿ ತಿಳಿಸಿದ್ದರು. ಪೌರತ್ವ ಕಾಯ್ದೆಯಲ್ಲಿ ಮುಸ್ಲಿಮರನ್ನೂ ಸೇರಿಸಬೇಕು. ಸಿಖ್ ಮಾತ್ರವಲ್ಲ, ಎಲ್ಲಾ ಧರ್ಮದವರ ಹಿತಚಿಂತನೆ ನಮ್ಮ ಧ್ಯೇಯವಾಗಿದೆ ಎಂದು ಬಿಜೆಪಿಯ ಮತ್ತೊಂದು ಮಿತ್ರಪಕ್ಷವಾಗಿರುವ ಅಕಾಲಿದಳ ಪ್ರತಿಕ್ರಿಯಿಸಿದೆ.